ಉಡುಪಿ : ಮುಂಬೈ ನಾಳಾ ಸೋಪಾರದಲ್ಲಿ ತುಳುಕೂಟದ ವತಿಯಿಂದ ಆಯೋಜಿಸಲಾದ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅಂಬಲಪಾಡಿಯ ವಿಶು ಶೆಟ್ಟಿ ಅವರಿಗೆ 2026ನೇ ಸಾಲಿನ ‘ತುಳುನಾಡ ಐಸಿರಿ’ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಯಿತು.

ಸಂಸ್ಥೆಯ ಅಧ್ಯಕ್ಷ ಶಶಿಧರ ಕೆ. ಶೆಟ್ಟಿ ಇನ್ನಂಜೆ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಯಶೋಧ ಎಸ್. ಕೊಟ್ಯಾನ್ ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಪ್ರಶಸ್ತಿಯೊಂದಿಗೆ ರೂ. 25,000 ಗೌರವಧನ ನೀಡಲಾಗಿದ್ದು, ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ವಿಶು ಶೆಟ್ಟಿ ಅವರು ಈ ಹಣವನ್ನು ಅಗತ್ಯವಿರುವವರಿಗೆ ದಾನವಾಗಿ ನೀಡಿದರು.


ಈ ಬಾರಿ ಬನ್ನಂಜೆಯ ದಲಿತ ಮಹಿಳೆ ಶಕುಂತಳಾ ಅವರ ಪತಿಯ ಚಿಕಿತ್ಸೆಗೆ ರೂ. 20,000 ಹಾಗೂ ಕಾಪು ನಿವಾಸಿ ಬಾಲಕಿ ಹಿಮಾನಿ ಶೆಟ್ಟಿಯ ಚಿಕಿತ್ಸೆಗೆ ರೂ. 5,000 ನೀಡುವ ಮೂಲಕ ಮಾನವೀಯತೆ ಮೆರೆದರು. ಸಾಮಾಜಿಕ ಬದ್ಧತೆಯೊಂದಿಗೆ ಪ್ರಶಸ್ತಿ ಹಣವನ್ನು ದಾನ ಮಾಡುವ ವಿಶು ಶೆಟ್ಟಿಯವರ ನಡೆಗೆ ಕಾರ್ಯಕ್ರಮದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.



