ಉಡುಪಿ: ಕೊಡವೂರು ಗ್ರಾಮದ ವಡಭಾಂಡೇಶ್ವರ ಪರಿಸರದಲ್ಲಿ ಅನಧಿಕೃತ ಮದರಸದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದು ತತ್ಕ್ಷಣ ಕಡಿವಾಣ ಹಾಕಬೇಕು ಎಂದು ಹಿಂದೂ ಸಂಘಟನೆ ಮತ್ತು ವಡಭಾಂಡೇಶ್ವರ ಪರಿಸರ ನಾಗರಿಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಹಶೀಲ್ದಾರ, ಸಂಸದ ಮತ್ತು ಶಾಸಕರಿಗೆ ಮನವಿ ನೀಡಿ ಆಗ್ರಹಿಸಿದ್ದಾರೆ.

ಇಲ್ಲಿರುವ ಮದರಸವು ಯಾವುದೇ ರೀತಿಯ ಪರವಾನಿಗೆ ಪಡೆದುಕೊಳ್ಳದೆ 4ರಿಂದ 15 ವರ್ಷದೊಳಗಿನ ಸುಮಾರು 35-40 ಮಂದಿ ಮಕ್ಕಳಿಗೆ ಧರ್ಮಬೋಧನೆ ಮಾಡುತ್ತೇವೆ ಎಂದು ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಯಾವುದೇ ಸುಸಜ್ಜಿತ ಕಟ್ಟಡ ಅಥವಾ ಮೂಲ ಸೌಕರ್ಯವನ್ನು ಹೊಂದಿರದೆ ಕೇವಲ ದುರುದ್ದೇಶದಿಂದ ಮುಸ್ಲಿಂ ವಿದ್ಯಾರ್ಥಿಗಳಿಗೆ ಧಾರ್ಮಿಕ ಶಿಕ್ಷಣ ಎಂಬ ಹೆಸರಿನಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿದ್ದಾರೋ ಎಂಬ ಗುಮಾನಿಯೂ ವ್ಯಕ್ತವಾಗಿದೆ.

ಈ ಪ್ರದೇಶವು ಗ್ರಾಮದ ಒಳಪ್ರದೇಶದಲ್ಲಿದ್ದು ಸಂಜೆಯಾದ ಬಳಿಕ ಕೆಲವೊಂದು ಅಪರಿಚಿತ ಮುಸ್ಲಿಮರು ಆಗಾಗ ಬಂದು ಹೋಗುತ್ತಿರುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಮುಂದಿನ ದಿನಗಳಲ್ಲಿ ಇಂತಹ ಅಕ್ರಮ ಚಟುವಟಿಕೆಗಳು ದೇಶಕ್ಕೆ ಮಾರಕವಾಗುವುದಲ್ಲದೆ ಪರಿಸರದ ಶಾಂತಿ ಸಾಮರಸ್ಯಕ್ಕೆ ಧಕ್ಕೆ ಉಂಟು ಮಾಡುವ ಎಲ್ಲ ಸಂಭವ ಇರುವುದರಿಂದ ಮುಂಜಾಗೃತಾ ಕ್ರಮವಾಗಿ ಯಾವುದೇ ಕಾನೂನನ್ನು ಪಾಲಿಸದೆ ಅನಧಿಕೃತವಾಗಿ ನಡೆಸುತ್ತಿರುವ ಅಕ್ರಮ ಮದರಸ ಮತ್ತು ಅನಧಿಕೃತ ಚಟುವಟಿಕೆಗಳಿಗೆ ಕೂಡಲೇ ಕಡಿವಾಣ ಹಾಕಬೇಕಾಗಿದೆ ಎಂದು ಮನವಿಯಲ್ಲಿ ಆಗ್ರಹಿಸಿಲಾಗಿದೆ.

ಈ ಸಂದರ್ಭದಲ್ಲಿ ಹಿಂದು ಸಂಘಟನೆಯ ಮುಖಂಡರಾದ ಸುನೀಲ್ ಕೆ.ಆರ್., ಶ್ರೀಕಾಂತ್ ಶೆಟ್ಟಿ, ದಿನೇಶ್ ಮೆಂಡನ್, ಅಜಿತ್ ಕುಮಾರ್ ಕೊಡವೂರು, ಮಹೇಶ್ ಬೈಲೂರು, ಸ್ಥಳೀಯರಾದ ಶರತ್ ಕುಮಾರ್ ಬೈಲಕರೆ, ಅರುಣ್ ಜತ್ತನ್, ವಿನೋದ್ ಸುವರ್ಣ, ವಿಜಯಪ್ರಕಾಶ್, ಸತೀಶ್ ಆರ್. ಪೂಜಾರಿ, ಕರಾವಳಿ ಭಜನಾ ಮಂಡಳಿ, ಬೈಲಕರೆ ನಾಗಬನ ಸೇವಾ ಸಮಿತಿ, ದುರ್ಗಾಪರಮೇಶ್ವರಿ ಮಹಿಳಾ ಮಂಡಳಿ, ಬೈಲಕರೆ ಯುವಕ ಮಂಡಳಿ, ಬೈಲಕರೆ ಹಾಗೂ ವಡಭಾಂಡೇಶ್ವರ ಗ್ರಾಮಸ್ಥರು ಉಪಸ್ಥಿತರಿದ್ದರು.



