ಉಡುಪಿ: ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಶುಕ್ರವಾರ ಉಡುಪಿಗೆ ಬಂದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನಗರದಲ್ಲಿ ಭವ್ಯ ರೋಡ್ ಶೋ ನಡೆಸಿದರು. ಬೆಳಗ್ಗೆ ಆದಿ ಉಡುಪಿಯ ಹೆಲಿಪ್ಯಾಡ್ನಲ್ಲಿ ಬಂದಿಳಿದ ಮೋದಿ ಅವರನ್ನು ಬಿಗಿ ಭದ್ರತೆಯ ನಡುವೆ ನೇರವಾಗಿ ಬನ್ನಂಜೆ ವೃತ್ತಕ್ಕೆ ಕರೆತರಲಾಯಿತು.

ಅಲ್ಲಿಂದ ಕಲ್ಸಂಕ ವೃತ್ತದವರೆಗೆ ಸುಮಾರು 20 ನಿಮಿಷಗಳ ಕಾಲ ಅದ್ದೂರಿ ರೋಡ್ ಶೋ ನಡೆಯಿತು. ರಸ್ತೆ ಎರಡೂ ಬದಿಗಳಲ್ಲೂ ನಿಂತು ಪ್ರಧಾನಿ ಅವರನ್ನು ವೀಕ್ಷಿಸಲು ಜನಸಾಗರ ಸೇರುವಂತಿತ್ತು. ಜಿಲ್ಲೆಯ ವಿವಿಧ ಭಾಗಗಳಿಂದ ಬೆಳಿಗ್ಗೆಯೇ ಜನರು ಆಗಮಿಸಿದ್ದು, ಸಂಚಾರ ನಿಷೇಧದ ಹಿನ್ನೆಲೆಯಲ್ಲಿ ಪಾರ್ಕಿಂಗ್ ಸ್ಥಳಗಳಿಂದ ನಡೆದು ರೋಡ್ಶೋ ಮಾರ್ಗದಲ್ಲಿ ಜಮಾಯಿಸಿದ್ದರು.

ರೋಡ್ ಶೋ ಮಾರ್ಗದ ಕೆಲವೆಡೆ ನಿರ್ಮಿಸಿದ್ದ ವಿಶೇಷ ವೇದಿಕೆಗಳಲ್ಲಿ ಕರಾವಳಿಯ ಸಂಸ್ಕೃತಿ, ಯಕ್ಷಗಾನ, ನೃತ್ಯ ಹಾಗೂ ಭಕ್ತಿ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಂಸ್ಕೃತಿಕ ಪ್ರದರ್ಶನಗಳು ನಡೆಯುವ ಮೂಲಕ ಕಾರ್ಯಕ್ರಮಕ್ಕೆ ಮತ್ತಷ್ಟು ವರ್ಣ ಶುಭೆ ಸೇರಿಸಿತು.

ಶ್ರೀಕೃಷ್ಣ ಮಠ ದರ್ಶನ – ಸುವರ್ಣ ತೀರ್ಥ ಮಂಟಪ ಅನಾವರಣ

ರೋಡ್ಶೋ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಶ್ರೀಕೃಷ್ಣ ಮಠಕ್ಕೆ ಆಗಮಿಸಿ ವಿಶೇಷ ಪೂಜೆ ಹಾಗೂ ದರ್ಶನ ಮಾಡಿದರು. ಮೊದಲು ಭಕ್ತಿ ಪರಂಪರೆಯ ದಿಗ್ಗಜರಾದ ಸಂತ ಕನಕದಾಸರಿಗೆ ಪುಷ್ಪಾರ್ಚನೆ ಸಲ್ಲಿಸಿದರು. ನಂತರ ಕನಕನ ಕಿಂಡಿಗೆ ಅಲಂಕರಿಸಲಾದ ಚಿನ್ನದ ಕವಚವನ್ನು ಅನಾವರಣಗೊಳಿಸಿದರು.

ಇದೇ ವೇಳೆ ಮಠದಲ್ಲಿ ನಿರ್ಮಿಸಲಾದ ವೈಭವಶಾಲಿ ಸುವರ್ಣ ತೀರ್ಥ ಮಂಟಪವನ್ನು ಅಧಿಕೃತವಾಗಿ ಉದ್ಘಾಟಿಸಿದರು. ಬಳಿಕ ಶ್ರೀಕೃಷ್ಣ ದೇವರ ದರ್ಶನದ ಜೊತೆಗೆ ಮುಖ್ಯಪ್ರಾಣ ದೇವರ ಹಾಗೂ ಸುವರ್ಣ ಪಾದುಕೆಯ ಸೇವೆ ನೆರವೇರಿಸಿದರು.

ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರ ನೇತೃತ್ವದಲ್ಲಿ ಪರಂಪರಾಗತ ಪೂರ್ಣಕುಂಭಗಳೊಂದಿಗೆ ಪ್ರಧಾನ ಮಂತ್ರಿಯವರನ್ನು ಸ್ವಾಗತಿಸಲಾಯಿತು. ಮಠದ ಯತಿಗಳು, ಪೀಠಾಧಿಪತಿಗಳು, ವಿದ್ಯಾರ್ಥಿಗಳು ಮತ್ತು ಸಾವಿರಾರು ಭಕ್ತರು ಮಠದಲ್ಲಿ ಉಪಸ್ಥಿತರಿದ್ದರು.



