ಉಡುಪಿ: ವಿಶ್ವ ಶಾಂತಿಗಾಗಿ ದೇಶದಾದ್ಯಂತ ಕಾರ್ಮಿಕ ಸಂಘಟನೆ ಸಿಐಟಿಯು ಹಾಗೂ ಇತರ ಸಂಘಟನೆಗಳು ಕರೆ ನೀಡಿದ ಯುದ್ಧ ವಿರೋಧಿ ದಿನಾಚರಣೆಯನ್ನು ಉಡುಪಿ ಸಮಾನ ಮನಸ್ಕ ಸಂಘಟನೆಗಳು ಅಜ್ಜರಕಾಡು ಹುತಾತ್ಮ ಸ್ಮಾರಕದ ಬಳಿ ಆಚರಿಸಿ ಪ್ರತಿಭಟನೆ ನಡೆಸಿದವು. ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸಿಐಟಿಯು ರಾಜ್ಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ, ಜಗತ್ತಿನ ದೇಶಗಳ ಮೇಲೆ ಹಿಡಿತ ಸಾಧಿಸಲು ಅಮೆರಿಕಾ ಪೈಶಾಚಿಕ ದಾಳಿಗಳನ್ನು ನಡೆಸುತ್ತಿದ್ದು, ಅದು ಸಾಮ್ರಾಜ್ಯಶಾಹಿ ನೀತಿಯನ್ನು ಮುಂದುವರೆಸುತ್ತಿದೆ ಎಂದು ಆರೋಪಿಸಿದರು. ಬ್ರಿಟಿಷರ ವಸಾಹತುಶಾಹಿಯ ರೀತಿಯಲ್ಲಿಯೇ ಇಂದು ಅಮೆರಿಕಾ ಭಾರತದ ನೀತಿ ನಿಯಮಗಳ ಮೇಲೂ ಪ್ರಭಾವ ಬೀರುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಹೇಳಿದರು.

ಅಮೆರಿಕಾ ತನ್ನ ಸ್ವಾರ್ಥಕ್ಕಾಗಿ ಹಲವು ರಾಷ್ಟ್ರಗಳಲ್ಲಿ ಯುದ್ಧಗಳಿಗೆ ಕಾರಣವಾಗುತ್ತಿದೆ. ಕ್ಯೂಬಾದ ಮೇಲೆ ನಿರ್ಬಂಧ ಹೇರಿ ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ವೆನೆಜುವೆಲಾ, ಉಕ್ರೇನ್, ಪ್ಯಾಲೆಸ್ಟೈನ್ ಹಾಗೂ ಇರಾನ್ ಸಂಬಂಧಿಸಿದ ಘಟನೆಗಳಲ್ಲೂ ಅಮೆರಿಕದ ಪಾತ್ರದ ಬಗ್ಗೆ ಅವರು ತೀವ್ರ ಟೀಕೆ ವ್ಯಕ್ತಪಡಿಸಿದರು. ಜಗತ್ತಿನಲ್ಲಿ ನಡೆಯುತ್ತಿರುವ ಯುದ್ಧಗಳು ಕೊನೆಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಹಬಾಳ್ವೆ ಸಂಘಟನೆಯ ಇದ್ರೀಸ್ ಹೂಡೆ, ಅಮೆರಿಕಾ ತನ್ನ ಸ್ವಾರ್ಥಕ್ಕಾಗಿ ಸುಳ್ಳು ನೆಪಗಳನ್ನು ಮುಂದಿಟ್ಟು ಹಲವು ರಾಷ್ಟ್ರಗಳಲ್ಲಿ ಹಿಂಸಾಚಾರ ನಡೆಸಿ ಮಹಿಳೆಯರು ಮತ್ತು ಮಕ್ಕಳನ್ನೂ ನಿರ್ದಯವಾಗಿ ಹತ್ಯೆ ಮಾಡುತ್ತಿರುವುದು ಖಂಡನೀಯ ಎಂದು ಹೇಳಿದರು. ಡಿಎಸ್ಎಸ್ ರಾಜ್ಯ ಸಂಘಟನಾ ಸಮಿತಿ ಸಂಚಾಲಕ ಸುಂದರ್ ಮಾಸ್ತರ್, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ ವಿ., ಕವಿರಾಜ್ ಎಸ್. ಕಾಂಚನ್ ಅವರು ಮಾತನಾಡಿದರು. ಪ್ರತಿಭಟನೆಯಲ್ಲಿ ಸಿಐಟಿಯು ಸಂಘಟನೆಯ ಎಚ್. ನರಸಿಂಹ, ಉಮೇಶ್ ಕುಂದರ್, ನಳಿನಿ, ಮೋಹನ್, ಜನವಾದಿ ಮಹಿಳಾ ಸಂಘಟನೆಯ ಶೀಲಾವತಿ, ಸಾಲಿಡಾರಿಟಿ ಸಂಘಟನೆಯ ಅಪ್ವಾನ್, ಡಿಎಸ್ಎಸ್ ಸಂಘಟನೆಯ ಮಂಜುನಾಥ್ ಗಿಳಿಯಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.



