ಮಣಿಪಾಲ: ಇದು ಮಕ್ಕಳ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಪ್ರತಿಯೊಂದು ಕುಟುಂಬದೊಂದಿಗೆ ನಾವು ಇರುವೆವೆಂಬ ಮಾಹೆಯ ಬದ್ಧತೆಯ ಸಂಕೇತವಾಗಿದೆ. ನಮ್ಮ ಯುವ ಹೋರಾಟಗಾರರ ಧೈರ್ಯ ಹಾಗೂ ವೈದ್ಯಕೀಯ ತಜ್ಞರ, ಕುಟುಂಬಗಳ ಮತ್ತು ಬೆಂಬಲ ಸಂಸ್ಥೆಗಳ ಸಹಕಾರವು ಜಾಗೃತಿಯನ್ನು ನೈಜ ಕ್ರಿಯಾಶೀಲ ಬೆಂಬಲವಾಗಿ ಪರಿವರ್ತಿಸಲು ನಮಗೆ ಸ್ಪೂರ್ತಿಯಾಗಿದೆ ಎಂದು ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನ ಪ್ರೋ-ಚಾನ್ಸೆಲರ್, ಡಾ. ಎಚ್.ಎಸ್. ಬಲ್ಲಾಳ್ ಹೇಳಿದರು.

ಅವರು ಇನ್ಸ್ಟಿಟ್ಯೂಷನ್ ಆಫ್ ಇಮಿನೆನ್ಸ್ ಡೀಮ್ಡ್-ಟು-ಬಿ ಯೂನಿವರ್ಸಿಟಿ ಆಗಿರುವ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ), ಇದರ ಘಟಕಗಳಾದ ಕಸ್ತೂರ ಬಾ ಮೆಡಿಕಲ್ ಕಾಲೇಜ್ (ಕೆಎಂಸಿ) ಹಾಗೂ ಮಣಿಪಾಲ್ ಸ್ಕೂಲ್ ಆಫ್ ಕಾಮರ್ಸ್ ಆಂಡ್ ಎಕನಾಮಿಕ್ಸ್ ಮುಖಾಂತರ, ಮಣಿಪಾಲ್ನ ಡಾ. ಟಿ.ಎಂ.ಎ. ಪೈ ಆಡಿಯೋಟೋರಿಯಂನಲ್ಲಿ ಶಿಶು ಭಾರತ್: ಭಾರತದ ಧೈರ್ಯಶಾಲಿ ಹೃದಯಗಳ ಪೋಷಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ದಿ ಡಿಯೋಟ್ ಫೌಂಡೇಶನ್ ಕ್ಯಾಲಿಫೋರ್ನಿಯಾ ಸಂಸ್ಥಾಪಕ ಶ್ರೀಮತಿ ಅನಾಘಾ ಜೋಶಿ, ಬಿಒಬಿ ಕಾರ್ಡ್ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ರವೀಂದ್ರ ರೈ ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಬೋನ್ ಟ್ಯೂಮರ್ ನಲ್ಲಿ ಹೋರಾಡಿ ಗೆದ್ದು ಬಂದ ಕುಮಾರಿ ವೀನಾ ಟಿ. ಎನ್., ತಮ್ಮ ಹೋರಾಟದ ಮನಕಲಕುವ ಅನುಭವವನ್ನು ಹಂಚಿಕೊಂಡರು.

ಮಾಹೆಯ ಪ್ರೊವೈಸ್ ಚಾನ್ಸಲರ್ ಡಾ. ಶರತ್ ಕೆ. ರಾವ್ ಸ್ವಾಗತಿಸಿದರು. ಕಸ್ತೂರ್ ಬಾ ಮೆಡಿಕಲ್ ಕಾಲೇಜಿನ ಮಕ್ಕಳ ಕ್ಯಾನ್ಸರ್ ಚಿಕಿತ್ಸಾ ವಿಭಾಗದ ಪ್ರಾಧ್ಯಾಪಕ ಹಾಗೂ ವಿಭಾಗ ಮುಖ್ಯಸ್ಥ ಡಾ. ವಾಸುದೇವ ಭಟ್ ಕೆ, ಇಲಾಖೆಯ ವಿವಿಧ ಚಟುವಟಿಕೆಗಳ ಕುರಿತು ವಿವರವಾದ ಮಾಹಿತಿಗಳನ್ನು ನೀಡಿದರು. ಶ್ರೀಮತಿ ಹಿಲ್ಡಾ ಕೋರ್ನೆಲಿಯೋ ವಂದಿಸಿದರು. ಈ ಕಾರ್ಯಕ್ರಮವನ್ನು ಕಸ್ತೂರ ಬಾ ಮೆಡಿಕಲ್ ಕಾಲೇಜ್ ಹಾಗೂ ಡಾ. ಧರ್ಮಾಂಬಾಳ ನಮಸಿವಾಯಂ ಟ್ರಸ್ಟ್ ಸಂಯುಕ್ತವಾಗಿ ಆಯೋಜಿಸಿದ್ದು, ದಿ ಡಯೋಟ್ ಫೌಂಡೇಶನ್ , ಕ್ಯಾಲಿಫೋರ್ನಿಯಾ ಹಾಗೂ ಮಾಹೆಯ ಎಕನಾಮಿಕ್ಸ್ ಅಂಡ್ ಸೋಷಿಯಲ್ ನೆಟ್ವರ್ಕಿಂಗ್ ಸೆಂಟರ್ ಇವರ ಸಹಯೋಗದಲ್ಲಿ ನಡೆಸಲಾಯಿತು. ಕಾರ್ಯಕ್ರಮದಲ್ಲಿ ಪ್ರಮುಖ ವೈದ್ಯಕೀಯ ತಜ್ಞರು, ದಾನಿಗಳು, ಆರ್ಥಿಕ ಸಂಸ್ಥೆಗಳು ಮತ್ತು ಸಾಮಾಜಿಕ ಬೆಂಬಲ ಸಂಸ್ಥೆಗಳು ಭಾಗವಹಿಸಿ, ಮಕ್ಕಳ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವ ಕುಟುಂಬಗಳು ಎದುರಿಸುತ್ತಿರುವ ಆರ್ಥಿಕ ಸವಾಲುಗಳನ್ನು ಪರಿಹರಿಸುವ ಗುರಿಯೊಂದಿಗೆ ಸಹಕರಿಸಿದರು.



