ಬ್ರಹ್ಮಾವರ: ಬ್ರಹ್ಮಾವರ ತಾಲೂಕು ರಚನೆಯ ಕಾರಣಿಕರ್ತರಲ್ಲಿ ಓರ್ವರಾದ ಬ್ರಹ್ಮಾವರ ತಾಲ್ಲೂಕು ಹೋರಾಟ ಸಮಿತಿಯ ಅಧ್ಯಕ್ಷರಾದ ಬಾರ್ಕೂರು ಸತೀಶ್ ಪೂಜಾರಿ ಅವರು ಅನಾರೋಗ್ಯದ ಹಿನ್ನಲೆಯಲ್ಲಿ ನಿಧನರಾಗಿದ್ದಾರೆ. ಸತೀಶ್ ಪೂಜಾರಿ ಅವರು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. 2013ರಲ್ಲಿ ಬ್ರಹ್ಮಾವರ ತಾಲೂಕು ರಚನೆಗಾಗಿ ಬ್ರಹ್ಮಾವರ ಬಸ್ ನಿಲ್ದಾಣದ ಬಳಿ ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ಸರಕಾರದ ಗಮನ ಸೆಳೆಯಲು ಸತೀಶ್ ಪೂಜಾರಿ ಅವರು ನಿರಂತರ ಹೋರಾಟ ನಡೆಸಿದ್ದರು.

1975ರ ಏಪ್ರಿಲ್ 1ರಂದು ಹನೆಹಳ್ಳಿ ಸಮೀಪದ ಮೂಡುಕೆರೆಯಲ್ಲಿ ಜನಿಸಿದ ಅವರು, ಉದ್ದಲ್ ಗುಡ್ಡೆಯಲ್ಲಿರುವ ನ್ಯಾಷನಲ್ ಹೈಯರ್ ಪ್ರೈಮರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಬಳಿಕ ನ್ಯಾಷನಲ್ ಜೂನಿಯರ್ ಕಾಲೇಜು ಬಾರ್ಕೂರಿನಲ್ಲಿ ಪ್ರೌಢಶಾಲೆ ಮತ್ತು ಪಿಯುಸಿ ಶಿಕ್ಷಣ ಪಡೆದರು. ಬ್ರಹ್ಮಾವರದ ಸೇಂಟ್ ಮೇರಿಸ್ ಸಿರಿಯನ್ ಫಸ್ಟ್ ಗ್ರೇಡ್ ಕಾಲೇಜಿನಲ್ಲಿದ್ದಾಗ ತಮ್ಮ ನಾಯಕತ್ವದ ಗುಣದ ಮೂಲಕ ಗುರುತಿಸಲ್ಪಟ್ಟಿದ್ರು.

ಅಲ್ಲಿ ಅವರು 1993-95ರ ಅವಧಿಯಲ್ಲಿ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ನಂತರ ಎಲ್ಎಲ್ಬಿ ಓದುವಾಗ, 1995-96ರ ಸಾಲಿನಲ್ಲಿ ಮಂಗಳೂರು ವಿಶ್ವವಿದ್ಯಾಲಯದ ಎಲ್ಲಾ ಕಾಲೇಜುಗಳ ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಹನೆಹಳ್ಳಿ ಪಂಚಾಯತ್ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು ಮತ್ತು ಉಡುಪಿ ತಾಲೂಕು ಪಂಚಾಯತ್ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದರು. ಸಮಾಜ ಸೇವಕರಾಗಿ ಹಾಗೂ ಗಬ್ಬರ್ ಸಿಂಗ್ ಎನ್ನುವ ಚಲನ ಚಿತ್ರ ನಿರ್ಮಾಪಕರರಾಗಿ ಬಾರ್ಕುರು ಸತೀಶ್ ಪೂಜಾರಿ ಹೆಸರು ಮಾಡಿದ್ದರು.

ಕರಳು ಸಂಬಂಧಿತ ಕಾಯಿಲೆಯಿಂದ ಬಳಲುತ್ತಿದ್ದ ಸತೀಶ್ ಪೂಜಾರಿ ಅವರು ಹಲವು ವರ್ಷಗಳಿಂದ ಮಣಿಪಾಲ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರದಂದು ಅಲ್ಪಕಾಲದ ಅಸೌಖ್ಯದಿಂದ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.



