ಉಡುಪಿ: ಬೀದಿ ನಾಯಿಗಳ ದಾಳಿಗೆ ತುತ್ತಾಗಿ ಗಂಭೀರವಾಗಿ ಗಾಯಗೊಂಡಿದ್ದ ಮುಳ್ಳುಹಂದಿಯನ್ನು ಸಮಾಜಸೇವಕ ನಿತ್ಯಾನಂದ ಒಳಕಾಡುವರು ರಕ್ಷಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ ಘಟನೆ ಚಿತ್ಪಾಡಿಯ ಶ್ರೀನಿವಾಸ ನಗರದಲ್ಲಿ ನಡೆದಿದೆ.

ಸ್ಥಳೀಯರಾದ ಧನಂಜಯ ದೇವಾಡಿಗ ಅವರು ಗಾಯಗೊಂಡ ಸ್ಥಿತಿಯಲ್ಲಿದ್ದ ಮುಳ್ಳುಹಂದಿಯನ್ನು ಗಮನಿಸಿ ನಿತ್ಯಾನಂದ ಒಳಕಾಡು ಅವರ ಗಮನಕ್ಕೆ ತಂದಿದ್ದರು. ಮಾಹಿತಿ ಪಡೆದ ತಕ್ಷಣ ಸ್ಥಳಕ್ಕೆ ಧಾವಿಸಿದ ಒಳಕಾಡುವರು ಚಾಣಾಕ್ಷತನದಿಂದ ಗೋಣಿ ಚೀಲದ ಸಹಾಯದಿಂದ ಕಾರ್ಯಾಚರಣೆ ನಡೆಸಿ ಮುಳ್ಳುಹಂದಿಯನ್ನು ಸುರಕ್ಷಿತವಾಗಿ ರಕ್ಷಿಸುವಲ್ಲಿ ಯಶಸ್ವಿಯಾದರು.

ಮುಳ್ಳುಹಂದಿಯು ಆತಂಕಗೊಂಡ ಸ್ಥಿತಿಯಲ್ಲಿದ್ದು, ಯಾವುದೇ ಕ್ಷಣದಲ್ಲಿ ತನ್ನ ಮುಳ್ಳುಗಳನ್ನು ಎರಗಿಸಿ ಪ್ರತಿದಾಳಿ ನಡೆಸುವ ಸಾಧ್ಯತೆ ಇದ್ದ ಕಾರಣ ರಕ್ಷಣಾ ಕಾರ್ಯವು ಸವಾಲಿನದ್ದಾಗಿತ್ತು ಎಂದು ತಿಳಿದುಬಂದಿದೆ. ರಕ್ಷಿಸಲಾದ ಮುಳ್ಳುಹಂದಿಯನ್ನು ಅರಣ್ಯ ಇಲಾಖೆಯ ಫಾರೆಸ್ಟರ್ ಶಿವಾನಂದ ಅವರು ಸ್ವೀಕರಿಸಿದ್ದು, ಅಗತ್ಯ ಚಿಕಿತ್ಸೆ ನೀಡಿ ಸಂಪೂರ್ಣ ಗುಣಮುಖವಾದ ಬಳಿಕ ಕಾಡಿಗೆ ಬಿಡಲಾಗುವುದು ಎಂದು ತಿಳಿಸಿದ್ದಾರೆ.

ಇದೇ ವೇಳೆ, ಮುಳ್ಳುಹಂದಿಯೊಂದಿಗೆ ನಡೆದ ಕಾದಾಟದಲ್ಲಿ ಅದರ ತೀಕ್ಷ್ಣ ಮುಳ್ಳುಗಳು ದೇಹದ ಹಲವು ಭಾಗಗಳಿಗೆ ಚುಚ್ಚಿಕೊಂಡಿರುವ ಬೀದಿ ನಾಯಿ ನಾಪತ್ತೆಯಾಗಿದ್ದು, ಅದರ ಸ್ಥಿತಿ ಆತಂಕಕಾರಿಯಾಗಿದೆ ಎನ್ನಲಾಗಿದೆ. ಗಾಯಗೊಂಡ ನಾಯಿಗೆ ತುರ್ತು ಚಿಕಿತ್ಸೆಯ ಅಗತ್ಯವಿದ್ದು, ಅದರ ಪತ್ತೆಗಾಗಿ ಹುಡುಕಾಟ ಮುಂದುವರಿದಿದೆ.



