ಉಡುಪಿ : ಕಾರ್ಕಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘ (ರಿ) ಹಾಗೂ ಮಡಿವಾಳ ಯುವ ಘಟಕ, ಮಡಿವಾಳ ಮಹಿಳಾ ಘಟಕದ ಆತಿಥ್ಯದಲ್ಲಿ ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಪುರುಷರ ಪ್ರೊ ಕಬಡ್ಡಿ ಹಾಗೂ ಮಹಿಳೆಯರ ತ್ರೋಬಾಲ್ ಪಂದ್ಯಾಟ ಮಡಿವಾಳ ಮಾಚಿದೇವ ಟ್ರೋಫಿ-2025 ಯನ್ನು ಫೆ. 23 ರಂದು ಕಾರ್ಕಳ ಕಾಬೆಟ್ಟು ಸಮುದಾಯ ಭವನದ ಅಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಯುವ ಘಟಕ ಅಧ್ಯಕ್ಷ ಸಂಪತ್ ಕುಮಾರ್ ಕಣಂಜಾರು ತಿಳಿಸಿದ್ದಾರೆ.

ಅವರು ಗುರುವಾರ ನಗರ ಪತ್ರಿಕಾ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆಳಗ್ಗೆ 9 ಗಂಟೆಗೆ ಮಡಿವಾಳ ಮಾಚಿದೇವ ಟ್ರೋಫಿ ಉದ್ಘಾಟನೆ ನಡೆಯಲಿದ್ದು, ಶಾಸಕ, ಮಾಜಿ ಸಚಿವ ವಿ. ಸುನಿಲ್ ಕುಮಾರ್ ಉದ್ಘಾಟಿಸಲಿದ್ದಾರೆ. ಕಾರ್ಕಳ ತಾಲೂಕು ಮಡಿವಾಳ ಸಮಾಜ ಸೇವಾ ಸಂಘದ ಅಧ್ಯಕ್ಷ ಸುರೇಶ್ ಮಡಿವಾಳ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕೃಷ್ಣಯ್ಯ ಚಾರಿಟೇಬಲ್ ಟ್ರಸ್ಟ್ ಮುನಿಯಾಲು ಪ್ರವರ್ತಕ ಉದಯ ಶೆಟ್ಟಿ ಮುನಿಯಾಲು, ಮಾಚಿದೇವ ನಿಗಮದ ನಿಕಟಪೂರ್ವ ಅಧ್ಯಕ್ಷ ರಾಜು ಎಂ. ತಲ್ಲೂರು ಸಹಿತ ಅನೇಕ ಮುಖಂಡರು ಭಾಗವಹಿಸಲಿದ್ದಾರೆ ಎಂದರು.
ಸಮಾರೋಪ: ಅಂದು ಸಂಜೆ 4.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಉದ್ಯಮಿ ಪ್ರಸಾದ್ರಾಜ್ ಕಾಂಚನ್, ಸಭಾಭವನ ಕಟ್ಟಡ ಸಮಿತಿ ಅಧ್ಯಕ್ಷ ಉದಯ್ ಸಾಲ್ಯಾನ್ ಅಜ್ಜಾಡಿ, ಸಮಾಜ ಸೇವಕ ಬೋಳ ಪ್ರಶಾಂತ್ ಕಾಮತ್, ಡಾ. ರವೀಂದ್ರ ಶೆಟ್ಟಿ ಬಜಗೋಳಿ ಕಾರ್ಕಳ, ಹಿಂದೂ ಮುಖಂಡ ರತ್ನಾಕರ ಅಮೀನ್, ರಾಷ್ಟ್ರೀಯ ಮಹಿಳಾ ಆಯೋಗದ ಮಾಜಿ ಸದಸ್ಯೆ ಶ್ಯಾಮಲಾ ಎಸ್. ಕುಂದರ್, ಉದ್ಯಮಿ ಸಂಜೀವ ಮಡಿವಾಳ ಕಾಬೆಟ್ಟು ಸಹಿತ ಅನೇಕರು ಭಾಗವಹಿಸುತ್ತಾರೆ ಎಂದು ತಿಳಿಸಿದರು.
ಮಡಿವಾಳ ಸಮಾಜ ಬಾಂಧವರನ್ನು ಸಂಘಟಿಸುವ ಮತ್ತು ಒಂದೇ ವೇದಿಕೆಯಲ್ಲಿ ಒಟ್ಟು ಸೇರಿಸುವ ನಿಟ್ಟಿನಲ್ಲಿ ಮಡಿವಾಳ ಮಾಚಿದೇವ ಟ್ರೋಫಿ-2025 ಯನ್ನು ಹಮ್ಮಿಕೊಳ್ಳಲಾಗಿದೆ. ಕಳೆದ ಕೆಲವು ವರ್ಷಗಳಿಂದ ಈ ರೀತಿಯ ಕ್ರೀಡಾಕೂಟವನ್ನು ಆಯೋಜಿಸುತ್ತಿದ್ದು, ಈ ಬಾರಿ ಅಂತರ್ ಜಿಲ್ಲಾ ಮಟ್ಟದ ಆಹ್ವಾನಿತ ತಂಡಗಳ ಪುರುಷರ ಪ್ರೊ ಕಬಡ್ಡಿ ಹಾಗೂ ಮಹಿಳೆಯರ ತ್ರೋಬಾಲ್ ಪಂದ್ಯಾಟವನ್ನು ಹಮ್ಮಿಕೊಂಡಿದ್ದೇವೆ. ಈಗಾಗಲೇ ಮುಂಬೈ, ರಾಯಚೂರು, ಗದಗ ಸಹಿತ ನಾನಾ ಕಡೆಗಳಿಂದ 15 ತಂಡಗಳು ಹೆಸರನ್ನು ನೋಂದಾಯಿಸಿಕೊಂಡಿದೆ ಎಂದರು.
ಪಂದ್ಯಾಟದಲ್ಲಿ ವಿಜೇತರಾದ ತಂಡಕ್ಕೆ ಪ್ರಥಮ, ದ್ವಿತೀಯ, ತೃತೀಯ, ಚತುರ್ಥ ಮಾದರಿಯಲ್ಲಿ ಶಾಶ್ವತ ಫಲಕ ಹಾಗೂ ನಗದು ಬಹುಮಾನ ನೀಡಲಾಗುತ್ತದೆ. ಈ ಸ್ಪರ್ಧೆಯಲ್ಲಿ ಭಾಗವಹಿಸಲು ಮಡಿವಾಳ ಸಮಾಜದ ಬಂಧುಗಳಿಗೆ ಮಾತ್ರವೇ ಅವಕಾಶವನ್ನು ಕಲ್ಪಿಸಲಾಗುವುದು. ಪಂದ್ಯಾಟದಲ್ಲಿ ಭಾಗವಹಿಸುವವರಿಗೆ ಆಧಾರ್ ಕಾರ್ಡ್ ಮತ್ತು ಗುರುತಿನ ಚೀಟಿ ಕಡ್ಡಾಯ. ಕಬಡ್ಡಿಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 8197850756, 9110642960, 7022428208 ಹಾಗೂ ತ್ರೋಬಾಲ್ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 9483154168, 9902843839 ಸಂಪರ್ಕಿಸಬಹುದಾಗಿದೆ. ಪಂದ್ಯಾಟಕ್ಕೆ ಉಚಿತ ಪ್ರವೇಶವಿದೆ.