ಉಡುಪಿ : ಉಡುಪಿ ಜಿಲ್ಲೆಯಾದ್ಯಂತ ಪ್ರಧಾನಮಂತ್ರಿ ಮಾತೃವಂದನಾ ಯೋಜನೆ ಫಲಾನುಭವಿಗಳಿಗೆ ಒಟ್ಟು 7,77,42,000 ರೂಪಾಯಿ ಮೊತ್ತ ಬಿಡುಗಡೆಗೊಂಡಿದ್ದು, 16,377 ಮಂದಿ ತಾಯಂದಿರು ಈ ಯೋಜನೆಯಿಂದ ಪ್ರಯೋಜನ ಪಡೆದಿದ್ದಾರೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಮಾಹಿತಿ ಒದಗಿಸಿದರು.

ಉಡುಪಿ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಮಾತೃವಂದನಾ ಯೋಜನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮಹಿಳೆಯರ ಆರೈಕೆ, ಗರ್ಭಿಣಿ ತಾಯಂದಿರ ಪೋಷಣೆಗೆ ಸರ್ಕಾರ ಬದ್ಧವಾಗಿದೆ. ಯಾವುದೇ ಫಲಾನುಭವಿಗೆ ತೊಂದರೆ ಆಗದಂತೆ ಅಧಿಕಾರಿಗಳು ಕಾಳಜಿ ವಹಿಸಬೇಕು. 2023ರಿಂದ ಅಕ್ಟೋಬರ್ 2025ರವರೆಗೆ 16,377 ಫಲಾನುಭವಿಗಳ ನೊಂದಣಿ ನಡೆದಿದೆ. ಮೊದಲನೇ ಹೆರಿಗೆಗೆ 11,706 ಮಂದಿ ನೊಂದಾಯಿತರಾಗಿದ್ದು 3,18,51,000 ರೂಪಾಯಿ ಮೊತ್ತ ಬಿಡುಗಡೆಯಾಗಿದೆ. ಎರಡನೇ ಹೆಣ್ಣು ಮಗುವಿನ ಹೆರಿಗೆಗೆ 4,671 ಮಂದಿ ನೊಂದಾಯಿತರಾಗಿದ್ದು 2,80,26,000 ರೂಪಾಯಿ ಹಣ ಪಾವತಿ ಮಾಡಲಾಗಿದೆ.ಈ ಯೋಜನೆ ಅಡಿಯಲ್ಲಿ ಸರ್ಕಾರಿ ನೌಕರರು ಮತ್ತು ಹೆಚ್ಚಿನ ಆದಾಯದ ಕುಟುಂಬಗಳು ಹೊರತುಪಡಿಸಿ, ಉಳಿದ ತಾಯಂದಿರಿಗೆ ಮೊದಲ ಹೆರಿಗೆಗೆ 5,000 ರೂಪಾಯಿ ಹಾಗೂ ಎರಡನೇ ಹೆಣ್ಣು ಮಗುವಿನ ಹೆರಿಗೆಗೆ 6,000 ರೂಪಾಯಿ ನೇರ ಸಹಾಯ ನೀಡಲಾಗುತ್ತಿದೆ. ಜೊತೆಗೆ, ತಾಯಿ ಮತ್ತು ಮಗುವಿನ ಆರೋಗ್ಯಕ್ಕಾಗಿ ರೋಗನಿರೋಧಕ ಚುಚ್ಚುಮದ್ದು ಪಡೆಯುವುದು ಕಡ್ಡಾಯ ಎಂದು ಸಂಸದರು ಹೇಳಿದರು.

ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ರೀಮತಿ ಶ್ಯಾಮಲ, ಜಿಲ್ಲಾ ನಿರೂಪಣಾಧಿಕಾರಿ ಅನುರಾಧಾ ಹಾದಿಮಣಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ರೀಮತಿ ವಿಜಯ ನಾಯ್ಕ, ಶ್ರೀಮತಿ ಶ್ರೀಲತಾ (ಕಾರ್ಕಳ), ಶ್ರೀಮತಿ ಸುಜಯಾ (ಕುಂದಾಪುರ), ಶ್ರೀಮತಿ ಶಾರದಾ (ಜಿಲ್ಲಾ ಮಿಷನ್ ಸಂಯೋಜಕಿ) ಹಾಗೂ ಮಾತೃವಂದನಾ ಯೋಜನೆ ಜಿಲ್ಲಾ ಸಂಯೋಜಕ ಜೀವನ್ ಕುಮಾರ್ ಉಪಸ್ಥಿತರಿದ್ದರು.



