ಉಡುಪಿ : ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ರಾಷ್ಟ್ರೀಯ ಹೆದ್ದಾರಿ 169(ಎ) ಮಾರ್ಗದಲ್ಲಿ ಸಂಚರಿಸುವ ವಾಹನಗಳ ಸುಗಮ ಸಂಚಾರದ ದೃಷ್ಟಿಯಿಂದ ಮಾರ್ಚ್ 16ರಂದು ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ವಾಹನಗಳಿಗೆ ಬದಲಿ ಮಾರ್ಗದಲ್ಲಿ ಸಂಚರಿಸಲು ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ 169(ಎ) ಮಾರ್ಗದಲ್ಲಿ ಉಡುಪಿಯಿಂದ ಹೆಬ್ರಿ–ಆಗುಂಬೆ ಕಡೆಗೆ ಹೋಗುವ ವಾಹನಗಳು ಹಿರಿಯಡ್ಕ ಜಂಕ್ಷನ್ನಲ್ಲಿ ಮಾರ್ಗ ಬದಲಾಯಿಸಿ ಕೋಟ್ನಾಕಟ್ಟೆ–ಹರಿಖಂಡಿಗೆ–ಬೈರಂಪಳ್ಳಿ–ಪೆರ್ಡೂರು ಮೇಲ್ಪೇಟೆ ಮಾರ್ಗವಾಗಿ ಅಥವಾ ಹಿರಿಯಡ್ಕ–ಬಜೆ–ಕುಕ್ಕೆಹಳ್ಳಿ–ಪೇತ್ರಿ ಮಾರ್ಗವಾಗಿ ಹೆಬ್ರಿ ಹಾಗೂ ಆಗುಂಬೆ ಕಡೆಗೆ ಸಂಚರಿಸಬೇಕು.ರಾಷ್ಟ್ರೀಯ ಹೆದ್ದಾರಿ 169(ಎ) ಮಾರ್ಗದಲ್ಲಿ ಆಗುಂಬೆ–ಹೆಬ್ರಿಯಿಂದ ಉಡುಪಿ ಕಡೆಗೆ ಬರುವ ವಾಹನಗಳು ಪೆರ್ಡೂರು ಮೇಲ್ಪೇಟೆ–ಬೈರಂಪಳ್ಳಿ–ಹರಿಖಂಡಿಗೆ–ಕೋಟ್ನಾಕಟ್ಟೆ–ಹಿರಿಯಡ್ಕ ಜಂಕ್ಷನ್ ಮಾರ್ಗವಾಗಿ ಉಡುಪಿ ಕಡೆಗೆ ಸಂಚರಿಸಬೇಕು.

ರಾಷ್ಟ್ರೀಯ ಹೆದ್ದಾರಿ 169(ಎ) ಮಾರ್ಗದಲ್ಲಿ ಹೆಬ್ರಿಯಿಂದ ಪೆರ್ಡೂರು ಮಾರ್ಗವಾಗಿ ಪೇತ್ರಿ–ಬ್ರಹ್ಮಾವರ ಕಡೆಗೆ ಸಂಚರಿಸುವ ವಾಹನಗಳು ಪೆರ್ಡೂರು ಮೇಲ್ಪೇಟೆಯ ಆರ್ಎಸ್ಎಸ್ ಬ್ಯಾಂಕ್ ಸಮೀಪದ ಅಲಂಗಾರು ರಸ್ತೆ ಮೂಲಕ ಕರ್ಜೆ–ಪೇತ್ರಿ–ಬ್ರಹ್ಮಾವರ ಕಡೆಗೆ ಸಂಚರಿಸಬೇಕು. ಮಾರ್ಚ್ 16ರಂದು ಸಂಜೆ 4 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಪೆರ್ಡೂರು ಕೆಳಪೇಟೆಯಿಂದ ಮೇಲ್ಪೇಟೆಯ ಬಸ್ ನಿಲ್ದಾಣದವರೆಗೆ ವಾಹನ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.



