ಉಡುಪಿ : ಗರಿಕೆಮಠ, ಅಚ್ಲಾಡಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕೊರಗ ಕುಟುಂಬಗಳು ಹಲವು ದಶಕಗಳಿಂದ ಹೊಟ್ಟೆಪಾಡಿಗಾಗಿ ನಡೆಸಿಕೊಂಡು ಬಂದಿರುವ ಸಾಂಪ್ರದಾಯಿಕ ಕಟ್ಟಡಕಲ್ಲಿನ ಗಣಿಗಾರಿಕೆಯನ್ನು ಸ್ಥಳೀಯ ಅನ್ಯವರು ಕಬಳಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ, ಕರ್ನಾಟಕ–ಕೇರಳ ಕೊರಗ ಅಭಿವೃದ್ಧಿ ಸಂಘಗಳ ಒಕ್ಕೂಟದ ನೇತೃತ್ವದಲ್ಲಿ ಸೋಮವಾರ ಬ್ರಹ್ಮಾವರ ತಾಲೂಕು ಆಡಳಿತ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಒಕ್ಕೂಟದ ಅಧ್ಯಕ್ಷೆ ಸುಶೀಲಾ ನಾಡ ಅವರು, ಉಡುಪಿ ಜಿಲ್ಲೆ ಯಡ್ತಾಡಿ ಗ್ರಾಮದ ಸರ್ವೇ ನಂ. 145ರಲ್ಲಿ 1.84 ಎಕರೆ ಜಾಗದಲ್ಲಿ ಪರಿಶಿಷ್ಟ ಪಂಗಡದ ರಮಣಿ, ನರ್ಸಿ, ಐತ, ಚಂದ್ರ, ಭಾಸ್ಕರ್ ಸೇರಿದಂತೆ ಹಲವು ಕೊರಗ ಕುಟುಂಬಗಳು ಪೀಳಿಗೆಯಿಂದ ಕಟ್ಟಡಕಲ್ಲು ಗಣಿಗಾರಿಕೆ ಮಾಡುತ್ತಾ, ಮನೆ ಕಟ್ಟಿಕೊಂಡು ವಾಸಿಸುತ್ತಿದ್ದೀವೆ. ಇತ್ತೀಚೆಗೆ ಈ ಜಾಗದಲ್ಲಿ ಉತ್ತಮ ಗುಣಮಟ್ಟದ ಕಟ್ಟಡ ಕಲ್ಲು ದೊರೆಯುತ್ತಿರುವುದು ತಿಳಿದ ಕೆಲ ಸ್ಥಳೀಯರು ರಾಜಕೀಯ ಪ್ರಭಾವ ಬಳಸಿಕೊಂಡು ಜಾಗವನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ಈ ಜಾಗದಲ್ಲಿ ಗಣಿಗಾರಿಕಾ ಪರವಾನಿಗೆ ಪಡೆಯಲು ಕೆಲವರು ಇಲಾಖೆಗೆ ಅರ್ಜಿ ಸಲ್ಲಿಸಿರುವುದರಿಂದ, ಅದು ಮಂಜೂರು ಆದರೆ ಮೂಲ ನಿವಾಸಿಗಳಾದ ಕೊರಗ ಸಮುದಾಯಕ್ಕೆ ಭಾರೀ ಅನ್ಯಾಯವಾಗುತ್ತದೆ. ಜಿಲ್ಲಾಧಿಕಾರಿಗಳು ಯಾವುದೇ ಕಾರಣಕ್ಕೂ ಹೊರಗಿನವರಿಗೆ ಗಣಿಗಾರಿಕೆ ಪರವಾನಿಗೆ ನೀಡಬಾರದು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು

ಪ್ರತಿಭಟನಾ ಸ್ಥಳಕ್ಕೆ ಬಂದ ಉಡುಪಿ ಗಣಿ ಇಲಾಖೆಯ ಅಧಿಕಾರಿ ಹಾಜೀರ್ ಅವರು ಧರಣಿ ನಿರತರಿಂದ ಮಾತುಕತೆ ನಡೆಸಿದ ಬಳಿಕ ಕೊರಗ ಸಮುದಾಯದ ಆಕ್ಷೇಪಣೆ ಕುರಿತು ತಹಶಿಲ್ದಾರ್ ವರದಿ ಸಲ್ಲಿಸಿ, ನೀಡಿದ ಹೇಳಿಕೆಗಳನ್ನೂ ದಾಖಲು ಮಾಡಿರುವುದರ ಜೊತೆಗೆ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ನಡೆಯುವ ಸಭೆಯಲ್ಲಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಯಾರು ಬೇಕಾದರೂ ಕಾನೂನಿನ ಪ್ರಕಾರ ಅರ್ಜಿ ಹಾಕಿ ಪರವಾನಿಗೆ ಪಡೆದು ಗಣಿಗಾರಿಕೆ ನಡೆಸಬಹುದು, ಕೊರಗ ಕುಟುಂಬಗಳಿಗೂ ಅದೇ ಅವಕಾಶವಿದೆ. ಆದ್ದರಿಂದ ಪ್ರತಿಭಟನೆ ವಾಪಸ್ ಪಡೆಯಿರಿ ಎಂದು ಮನವಿ ಮಾಡಿದರು.

ಅಧಿಕಾರಿಗಳ ಭರವಸೆ ಹಿನ್ನೆಲೆಯಲ್ಲಿ ಕೊರಗ ಸಮುದಾಯದ ಕುಟುಂಬಗಳು ತಮ್ಮ ಪ್ರತಿಭಟನೆ ಹಿಂಪಡೆದರು. ಪ್ರತಿಭಟನೆಯಲ್ಲಿ ಬೊಗ್ರ ಕೊಕ್ಕರ್ಣೆ, ಕೆ.ಪುತ್ರನ್ ಕೊರಗ, ಶೀನ ಕೊರಗ, ದಿವಾಕರ ಕಳ್ತೂರು, ವೆಂಕಟೇಶ್ ಮಧುವನ, ಪ್ರೇಮಾ ಹಾಗೂ ಸಂತ್ರಸ್ತ ಕುಟುಂಬಗಳಾದ ರಮಣಿ, ಮಂಜುಳಾ, ಸುಜಾತಾ, ಚಂದ್ರ, ನರ್ಸಿ ಮತ್ತಿತರರು ಉಪಸ್ಥಿತರಿದ್ದರು.



