ಉಡುಪಿ: ಉಡುಪಿ ರಂಗಭೂಮಿ ವತಿಯಿಂದ, ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಸಹಯೋಗದಲ್ಲಿ, ಕೀರ್ತಿಶೇಷ ಅಂಬಾತನಯ ಮುದ್ರಾಡಿಯವರ ಹೆಸರಿನಲ್ಲಿ ನೀಡಲಾಗುವ ಪುಸ್ತಕ ಪ್ರಶಸ್ತಿಗೆ ನಾಟಕ ವಿಮರ್ಶಾ ಕೃತಿಗಳನ್ನು ಆಹ್ವಾನಿಸಲಾಗಿದೆ. ಈ ಕುರಿತು ನಗರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ರಂಗಭೂಮಿ ಅಧ್ಯಕ್ಷರು ಹಾಗೂ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕರಾದ ಡಾ. ತಲ್ಲೂರು ಶಿವರಾಮ ಶೆಟ್ಟಿ ಮಾಹಿತಿ ನೀಡಿದರು. ಪ್ರತಿವರ್ಷ ನೀಡಲಾಗುವ ಈ ಪ್ರಶಸ್ತಿ ‘ಅಂಬಾತನಯ ಮುದ್ರಾಡಿ ಸಂಸ್ಕರಣೆಯ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಸಹಯೋಗದ ಉಡುಪಿ ರಂಗಭೂಮಿ ಪುರಸ್ಕಾರ’ ಎಂದು ಕರೆಯಲ್ಪಡುತ್ತಿದ್ದು, ಪ್ರಶಸ್ತಿ ಪತ್ರ, ಸ್ಮರಣಿಕೆ ಹಾಗೂ ಹದಿನೈದು ಸಾವಿರ ರೂಪಾಯಿ ನಗದು ಬಹುಮಾನವನ್ನು ಒಳಗೊಂಡಿದೆ.

ಪ್ರಥಮ ವರ್ಷದಲ್ಲಿ ಗಂಭೀರ ಚಿಂತನೆಯ ನಾಟಕೇತರ ಸಾಹಿತ್ಯಕೃತಿಗಳನ್ನು ಮತ್ತು ದ್ವಿತೀಯ ವರ್ಷದಲ್ಲಿ ನಾಟಕ ಕೃತಿಗಳನ್ನು ಆಹ್ವಾನಿಸಿ ಪುರಸ್ಕಾರ ನೀಡಲಾಗಿತ್ತು. ಮೊದಲ ವರ್ಷದ ಪ್ರಶಸ್ತಿಯನ್ನು ಮೌನೇಶ ಬಡಿಗೇರ ಅವರ ‘ಅಭಿನಯ ಕಲಿಸಲು ಸಾಧ್ಯವಿಲ್ಲ’ ವಿಮರ್ಶಾ ಕೃತಿಗೆ, ಎರಡನೇ ವರ್ಷದ ಪ್ರಶಸ್ತಿಯನ್ನು ಎನ್.ಸಿ. ಮಹೇಶ್ ಅವರ ‘ಸಾಕು ತಂದೆ ರೂಮಿ’ ನಾಟಕ ಕೃತಿಗೆ ಪ್ರದಾನ ಮಾಡಲಾಗಿತ್ತು.

ಪ್ರಸ್ತುತ 2026ನೇ ಸಾಲಿನ ಮೂರನೇ ವರ್ಷದ ಪ್ರಶಸ್ತಿಗೆ 2024 ಮತ್ತು 2025ರಲ್ಲಿ ಪ್ರಥಮ ಆವೃತ್ತಿಯಾಗಿ ಪ್ರಕಟವಾದ ನಾಟಕ ರಂಗಕ್ಕೆ ಸಂಬಂಧಿಸಿದ ವಿಮರ್ಶಾ ಕೃತಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಲೇಖಕರು, ಪ್ರಕಾಶಕರು ಹಾಗೂ ರಂಗಾಸಕ್ತರು ತಮ್ಮ ಕೃತಿಗಳ ಮೂರು ಪ್ರತಿಗಳನ್ನು ಏಪ್ರಿಲ್ 30, 2026ರೊಳಗೆ ಸ್ಪರ್ಧೆಯ ಸಂಚಾಲಕರಾದ ಬೆಳಗೋಡು ರಮೇಶ್ ಭಟ್, ‘ದಕ್ಷಿಣ ಕಾಶಿ’ (ಡಿ-1), ಎರಡನೇ ಮುಖ್ಯರಸ್ತೆ, ವಾಣಿ ವಿಲಾಸ್ ಮೊಹಲ್ಲಾ, ಮೈಸೂರು–570002 ಈ ವಿಳಾಸಕ್ಕೆ ಕಳುಹಿಸಬಹುದು.

ಪತ್ರಿಕಾಗೋಷ್ಠಿಯಲ್ಲಿ ರಂಗಭೂಮಿಯ ಉಪಾಧ್ಯಕ್ಷರಾದ ಭಾಸ್ಕರ್ ರಾವ್ ಕಿದಿಯೂರು, ಎನ್. ರಾಜಗೋಪಾಲ್ ಬಲ್ಲಾಳ್ ಹಾಗೂ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಚಂದ್ರ ಕುತ್ಪಾಡಿ ಉಪಸ್ಥಿತರಿದ್ದರು.



