ಉಡುಪಿ: ನಗರಸಭೆ ಕಚೇರಿಯ ಶೌಚಾಲಯದ ತ್ಯಾಜ್ಯ ನೀರಿನ ಕೊಳವೆಯ ಜೋಡಣೆ ಕಳಚಿಕೊಂಡ ಪರಿಣಾಮ ಶೌಚ ತ್ಯಾಜ್ಯಗಳು ಬಹಿರಂಗವಾಗಿ ಹೊರಬೀಳುತ್ತಿದ್ದು, ಸುತ್ತಮುತ್ತಲ ಪರಿಸರದಲ್ಲಿ ತೀವ್ರ ದುರ್ವಾಸನೆ ಆವರಿಸಿದೆ. ಇದರಿಂದ ರೋಗ ಹರಡುವ ಭೀತಿ ಹೆಚ್ಚಾಗಿದ್ದು, ಸಾರ್ವಜನಿಕ ಆರೋಗ್ಯ ಸಂಪೂರ್ಣವಾಗಿ ಅಪಾಯದ ಅಂಚಿಗೆ ತಲುಪಿದೆ. ತೆರೆದ ಶೌಚ ತ್ಯಾಜ್ಯದಿಂದ ಮಾರಕ ಸೊಳ್ಳೆಗಳ ಉತ್ಪತ್ತಿಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಿದ್ದು, ಡೆಂಗ್ಯೂ, ಮಲೇರಿಯಾ ಸೇರಿದಂತೆ ಸಾಂಕ್ರಾಮಿಕ ರೋಗಗಳ ಹರಡುವ ಸಾಧ್ಯತೆ ತೀವ್ರವಾಗಿದೆ.

ಇದೇ ಮಾರ್ಗವಾಗಿ ಕವಿ ಮುದಣ್ಣ ಮಾರ್ಗದಿಂದ ನಿತ್ಯಾನಂದ ಮಂದಿರಕ್ಕೆ ಸಂಪರ್ಕಿಸುವ ರಸ್ತೆ ಹಾದುಹೋಗುತ್ತಿದ್ದು, ಪ್ರತಿದಿನ ಭಕ್ತಾದಿಗಳು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಸಂಚರಿಸುತ್ತಾರೆ. ಪಕ್ಕದಲ್ಲೇ ನಗರ ಪ್ರಾಥಮಿಕ ಆರೋಗ್ಯ ಕೇಂದ್ರವಿರುವುದರಿಂದ ಮುಂದೆ ಸಮಸ್ಯೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಹೊರಹೊಮ್ಮುತ್ತಿರುವ ಗಬ್ಬು ವಾಸನೆಯಿಂದ ಜನರು ಮೂಗು ಮುಚ್ಚಿಕೊಂಡೇ ಈ ಪ್ರದೇಶದಲ್ಲಿ ಸಂಚರಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಈ ಸಮಸ್ಯೆಯ ಬಗ್ಗೆ ನಗರಾಡಳಿತ ನಿರ್ಲಕ್ಷ್ಯ ವಹಿಸಿರುವುದು ಆಕ್ರೋಶಕ್ಕೆ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಶೌಚಾಲಯದ ತ್ಯಾಜ್ಯ ನೀರಿನ ಕೊಳವೆಯನ್ನು ದುರಸ್ತಿ ಮಾಡಿ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು ಹಾಗೂ ತಾರಾನಾಥ್ ಮೇಸ್ತ ಶಿರೂರು ನಗರಾಡಳಿತವನ್ನು ತೀವ್ರವಾಗಿ ಆಗ್ರಹಿಸಿದ್ದಾರೆ.



