ಉಡುಪಿ: ದೇವಸ್ಥಾನಗಳ ಜೀರ್ಣೋದ್ಧಾರವು ಕೇವಲ ಧಾರ್ಮಿಕ ಕಾರ್ಯವಷ್ಟೇ ಅಲ್ಲ, ಅದು ಇಡೀ ಮಾನವಕುಲದ ಅಭಿವೃದ್ಧಿಗೆ ದಾರಿ ಮಾಡಿಕೊಡುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅಭಿಪ್ರಾಯಪಟ್ಟರು.

ಬೈಂದೂರು ತಾಲೂಕಿನ ಹೇರಂಜಾಲು ಗ್ರಾಮದ ಶ್ರೀ ಗುಡೇ ಮಹಾಲಿಂಗೇಶ್ವರ ದೇವಸ್ಥಾನದ ಸನ್ನಿಧಿಯಲ್ಲಿ ಗುರುವಾರ ನಡೆದ ನೂತನ ರಾಜಗೋಪುರ ಸಮರ್ಪಣೆ ಹಾಗೂ ಅತಿರುದ್ರ ಮಹಾಯಾಗದ ಪುಣ್ಯ ಮುಹೂರ್ತ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ದೇವಸ್ಥಾನಗಳು ಶ್ರದ್ಧಾ ಮತ್ತು ಭಕ್ತಿಯ ಕೇಂದ್ರಗಳಾಗಿದ್ದು, ಅವುಗಳ ಅಭಿವೃದ್ಧಿಯಿಂದ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಆಧ್ಯಾತ್ಮಿಕ ಚಿಂತನೆ ವೃದ್ಧಿಯಾಗುತ್ತದೆ ಎಂದು ಹೇಳಿದರು. ಮನುಷ್ಯನಿಗೆ ನೆಮ್ಮದಿ ನೀಡುವ ಎರಡು ಪ್ರಮುಖ ಸ್ಥಳಗಳು ಅಮ್ಮನ ಮಡಿಲು ಹಾಗೂ ದೇವಸ್ಥಾನಗಳೆಂದು ಅವರು ತಿಳಿಸಿದರು. ಜೀವನದ ಸಂಕಷ್ಟಗಳನ್ನು ದೇವರ ಮುಂದೆ ಮುಕ್ತವಾಗಿ ಹಂಚಿಕೊಳ್ಳುವ ಮೂಲಕ ಮನಸ್ಸಿಗೆ ಶಾಂತಿ ದೊರೆಯುತ್ತದೆ ಎಂಬುದನ್ನು ಅವರು ವಿವರಿಸಿದರು.

ತಮ್ಮ ವೈಯಕ್ತಿಕ ಬದುಕಿನ ಅನುಭವಗಳನ್ನು ಹಂಚಿಕೊಂಡ ಅವರು, ಗುರುಗಳು, ಹಿರಿಯರು ಹಾಗೂ ತಂದೆ-ತಾಯಿಯ ಆಶೀರ್ವಾದವೇ ತಮ್ಮ ಬೆಳವಣಿಗೆಗೆ ಕಾರಣವಾಗಿದೆ ಎಂದು ಹೇಳಿದರು. ಮೂಲಗಳನ್ನು ಮರೆತರೆ ಮರ ಗಟ್ಟಿಯಾಗಿ ನಿಲ್ಲಲಾರದು ಎಂಬಂತೆ, ನಾವು ಬಂದ ದಾರಿಯನ್ನು ಎಂದಿಗೂ ಮರೆತಬಾರದು ಎಂದು ಅವರು ಸಲಹೆ ನೀಡಿದರು.

ಉಡುಪಿ ಜಿಲ್ಲೆಯನ್ನು ‘ದೇವರ ನಾಡು’ ಎಂದು ವರ್ಣಿಸಿದ ಸಚಿವೆ, ರಾಜ್ಯದ ವಿವಿಧ ಭಾಗಗಳಿಂದ ಭಕ್ತರು ಇಲ್ಲಿನ ದೇವಾಲಯಗಳಿಗೆ ಆಗಮಿಸುತ್ತಾರೆ ಎಂದು ಹೇಳಿದರು. ದೇವಾಲಯಗಳು ಅನ್ನಪ್ರಸಾದದ ಮೂಲಕ ಬಡವರ ಹಸಿವು ನೀಗಿಸುವ ಮಹತ್ತರ ಕಾರ್ಯ ನಿರ್ವಹಿಸುತ್ತಿವೆ ಎಂದರು. ದೇವರ ಕಾರ್ಯಗಳಲ್ಲಿ ರಾಜಕೀಯ ಭೇದಭಾವ ಮರೆತು ಜನರು ಒಗ್ಗೂಡುವುದು ಶ್ಲಾಘನೀಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು, ಶಾಸಕರಾದ ಬಾಲಚಂದ್ರ ಜಾರಕಿಹೊಳಿ, ಮಾಜಿ ಸಚಿವ ಜಯಪ್ರಕಾಶ್ ಹೆಗ್ಡೆ, ಮಾಜಿ ಶಾಸಕ ಗೋಪಾಲ ಪೂಜಾರಿ, ಉದ್ಯಮಿ ಜಯಶೀಲ ಶೆಟ್ಟಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ., ಜಿಲ್ಲಾ ಪಂಚಾಯತ್ ಸಿಇಒ ಪ್ರತೀಕ್ ಬಾಯಲ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.



