ಕೊಲ್ಲೂರು: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಳ ಎಂದರೆ ಅದು ಸೆಲೆಬ್ರಿಟಿಗಳ, ರಾಜಕಾರಣಿಗಳ, ಉದ್ಯಮಿಗಳ ಅಚ್ಚುಮೆಚ್ಚನ ಕ್ಷೇತ್ರಗಳಲ್ಲಿ ಒಂದು. ಹೀಗಾಗಿ ಕೊಲ್ಲೂರು ಶ್ರೀ ಮೂಕಾಂಬಿಕೆಗೆ ಭಕ್ತರು ವಿಶೇಷ ವಸ್ತುಗಳನ್ನು ಸಮರ್ಪಿಸುವುದು ವಾಡಿಕೆ. ದೇಶದ ಅತ್ಯಂತ ಸುಪ್ರಸಿದ್ಧ ಸಂಗೀತ ನಿರ್ದೇಶಕ, ಸ್ವರ ಮಾಂತ್ರಿಕ ಇಳಯರಾಜ ಅವರು ತಮ್ಮ ಅಚ್ಚುಮೆಚ್ಚಿನ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ ಇಂದು ಹರಕೆ ರೂಪದಲ್ಲಿ ಸರಿಸುಮಾರು 4 ಕೋಟಿ ರೂಪಾಯಿ ಮೌಲ್ಯದ ವಜ್ರ ಖಚಿತ ಕಿರೀಟ ಮತ್ತು ವೀರಭದ್ರ ಸ್ವಾಮಿಗೆ ರಜತ ಕಿರೀಟ ಸಹಿತ ಖಡ್ಗ ಸಮರ್ಪಿಸಿದರು.

ಹರಕೆ ರೂಪದಲ್ಲಿ ಬಂದ 4 ಕೋಟಿ ರೂಪಾಯಿ ಮೌಲ್ಯದ ವಜ್ರ ಖಚಿತ ಕಿರೀಟ ಮತ್ತು ರಜತ ಕಿರೀಟ ಸಹಿತ ಖಡ್ಗವನ್ನು ಪುರ ಮೆರವಣಿಗೆಯ ಮೂಲಕ, ಪೂರ್ಣ ಕುಂಭ ಸ್ವಾಗತದ ಮೂಲಕ ದೇಗುಲಕ್ಕೆ ಕರೆತರಲಾಯಿತು.

ಪುರಮೆರವಣಿಗೆಯಲ್ಲಿ ಸ್ವತಃ ಇಳಯರಾಜ ಮತ್ತು ಕುಟುಂಬ ವರ್ಗ, ಹಾಗೂ ದೇವಳದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಬಾಬು ಹೆಗ್ಡೆ, ಸಮಿತಿ ಸದಸ್ಯರು, ದೇಗುಲದ ಅಧಿಕಾರಿ ವರ್ಗ, ನೂರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗಿಯಾದರು.

ದೇಗುಲದ ಧಾರ್ಮಿಕ ವಿಧಿ ವಿಧಾನ ಮೂಲಕ ಹರಕೆ ರೂಪದಲ್ಲಿ ಬಂದ 4 ಕೋಟಿ ರೂಪಾಯಿ ಮೌಲ್ಯದ ವಜ್ರ ಖಚಿತ ಕಿರೀಟ ಮತ್ತು ರಜತ ಕಿರೀಟ ಸಹಿತ ಖಡ್ಗ ಸ್ವೀಕರಿಸಲಾಯಿತು. ಬಳಿಕ ದೇವಿಗೆ ಅಪರೂಪದ ಕಾಣಿಕೆ ನೀಡಿದ ಇಳಯರಾಜ ಅವರನ್ನು ದೇವಳದ ವತಿಯಿಂದ ಸನ್ಮಾನಿಸಿ ಮಾಹದಾನಿ ಎಂದು ಗೌರವಾರ್ಪಣೆ ಸಲ್ಲಿಸಲಾಯಿತು.

ಕೊಲ್ಲೂರು ಶ್ರೀ ಮೂಕಾಂಬಿಕೆಯ ಪರಮ ಭಕ್ತರಾಗಿರುವ ಇಳಯರಾಜ ಅವರು ಈ ಹಿಂದೆಯೂ ಕೂಡ ಬಗೆ ಬಗೆಯ ಆಭರಣಗಳನ್ನು ದೇವಿ ಸಮರ್ಪಿಸಿದ್ದರು. ಈ ಬಾರಿ ದೇವಿಗೆ ವಿಶೇಷ ಕಾಣಿಕೆ ನೀಡುವ ಮೂಲಕ , ಮೂಕಾಂಬಿಕೆಯ ದರ್ಶನ ಮಾಡಿ ಪುಳಕಿತರಾದರು. ಬಳಿಕ ಆನಂದ ಪುಳಕಿರಾದ ಇಳಯರಾಜ ಅವರು ಎಲ್ಲಾ ಆ ದೇವಿಯ ಕೃಪೆ, ನಾನು ಮಾಡಿದ್ದು ಏನು ಇಲ್ಲ. ಎಲ್ಲಾ ದೇವಿ ನೀಡಿದ್ದು ಅಷ್ಟೆ ಎಂದು ಆನಂದ ಭಾಷ್ಪ ಸುರಿಸಿದರು.



