ಉಡುಪಿ: ದಕ್ಷಿಣ ಭಾರತದ ಕುಖ್ಯಾತ ಕಳ್ಳ ಉಮೇಶ್ ಬಳೆಗಾರ/ಉಮೇಶ್ ರೆಡ್ಡಿ (47) ಕಳವು ಮಾಡಿದ್ದ 55 ಗ್ರಾಂ ತೂಕದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಕಾಪು ಠಾಣೆಯ ಪ್ರಕರಣವೊಂದರಲ್ಲಿ ಜ.02ರಂದು ಬಂಧಿತನಾದ ಉಮೇಶ್, ಡಿ.04 ರಂದು ಮಲ್ಲಾರು ಗ್ರಾಮದ ಮನೆಯೊಂದರಲ್ಲಿ ಕಳ್ಳತನ ಮಾಡಿದ ಚಿನ್ನವನ್ನು ತಮಿಳುನಾಡಿನ ಮಧುರೈನಲ್ಲಿ ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದ.

ಕಾರ್ಕಳ ಉಪವಿಭಾಗದ ಪ್ರಭಾರ ಡಿವೈಎಸ್ಪಿ ಪ್ರಭು ಡಿ.ಟಿ. ನೇತೃತ್ವದಲ್ಲಿ ಕಾಪು ವೃತ್ತ ನಿರೀಕ್ಷಕ ಅಝಮತ್ ಅಲಿ ಜಿ. ಅವರ ತಂಡ ಆರೋಪಿಯನ್ನು ಮಧುರೈಗೆ ಕರೆದುಕೊಂಡು ಹೋಗಿ, ಆತನ ಸೂಚನೆಯ ಮೇರೆಗೆ 55 ಗ್ರಾಂ ಚಿನ್ನದ ಗಟ್ಟಿಯನ್ನು ಪತ್ತೆಹಚ್ಚಿ ಸ್ವಾಧೀನಪಡಿಸಿಕೊಂಡಿದೆ. ಈ ಕಾರ್ಯಾಚರಣೆಯಲ್ಲಿ ಅಪರಾಧ ಪತ್ತೆದಳ, ಬೆರಳು ಮುದ್ರೆ ಘಟಕ ಹಾಗೂ ವಿವಿಧ ಠಾಣೆಗಳ ಪೊಲೀಸ್ ಸಿಬ್ಬಂದಿ ಸಹಕರಿಸಿದ್ದರು.



