ಕಾಪು : ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಇದೇ ಬರುವ ಸೆಪ್ಟೆಂಬರ್ 22 ರಿಂದ ಮೊದಲ್ಗೊಂಡು ಅಕ್ಟೋಬರ್ 2ರ ವರೆಗೆ 11 ದಿನಗಳ ಪರ್ಯಂತ ನಡೆಯಲಿರುವ ಶರನ್ನವರಾತ್ರಿ ಮಹೋತ್ಸವ ಮತ್ತು ವಿಜಯ ದಶಮಿಯವರೆಗೆ ಪ್ರತಿನಿತ್ಯ ನಡೆಯುವ ವಿಶೇಷ ಪೂಜೆಯ ವಿವರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಮಾಹಿತಿಯಿರುವ ಆಮಂತ್ರಣ ಪತ್ರಿಕೆಯನ್ನು ಸೆಪ್ಟೆಂಬರ್ 2ರ ಮಂಗಳವಾರ ಕಾಲಾವಧಿ ಹೂವಿನ ಪೂಜೆಯ ಸಂದರ್ಭದಲ್ಲಿ ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನಲ್ಲಿ ಪ್ರಾರ್ಥಿಸುವ ಮೂಲಕ ಬಿಡುಗಡೆ ಮಾಡಲಾಯಿತು.

ಈ ಬಾರಿಯ ನವರಾತ್ರಿ ಬಹಳ ವಿಶೇಷವಾಗಿದ್ದು ನೂತನ ಗುಡಿಯಲ್ಲಿ ನೆಲೆಸಿರುವ ಅಮ್ಮನಿಗೆ ಪ್ರಥಮ ನವರಾತ್ರಿಯಾಗಿರುತ್ತದೆ, ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅಮ್ಮನ ಅನುಗ್ರಹವನ್ನು ಪಡೆದುಕೊಳ್ಳಬೇಕೆಂದು ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯ ಆಶಯವಾಗಿರುತ್ತದೆ. ಈಗಾಗಲೇ ನವರಾತ್ರಿಯ ಬಗ್ಗೆ ಸಭೆಯನ್ನು ನಡೆಸಲಾಗಿದ್ದು ಭಕ್ತಾದಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಸೂಕ್ತ ವ್ಯವಸ್ಥೆಯನ್ನು ಮಾಡುವುದು ಸಮಿತಿಯ ಜವಾಬ್ದಾರಿಯಾಗಿರುತ್ತದೆ. ನವರಾತ್ರಿಯಲ್ಲಿ ಪ್ರತಿದಿನ ಘಂಟಾನಾದ ಸೇವೆಯನ್ನು ಮಾಡಲು ಭಕ್ತರಿಗೆ ಅವಕಾಶವನ್ನು ಮಾಡಿಕೊಡಲಾಗಿದೆ. ದುರ್ಗಾ ನಮಸ್ಕಾರ, ಕಲ್ಪೋಕ್ತ ಪೂಜೆ ಹಾಗೂ ಇನ್ನಿತರ ಸೇವೆಯ ಅವಕಾಶವನ್ನು ಒದಗಿಸಲಾಗಿದೆ. ಸೆಪ್ಟೆಂಬರ್ 30ರ ಮಂಗಳವಾರ ಮಹಾ ಚಂಡಿಕಾಯಾಗ, ಕೆಂಡಸೇವೆ, ಮಹಾ ಅನ್ನಪ್ರಸಾದ ನಡೆಯಲಿದೆ.

ಚಂಡಿಕಾಯಾಗದ ಸಂಕಲ್ಪಕ್ಕೆ ರೂಪಾಯಿ 5000/- ಪಾವತಿಸಿದ ಭಕ್ತರಿಗೆ ಚಂಡಿಕಾಯಾಗದ ವಿಶೇಷ ಪ್ರಸಾದವನ್ನು ನೀಡುವ ವ್ಯವಸ್ಥೆಯನ್ನು ಮಾಡಲಾಗುತ್ತದೆ, ಸಂಕಲ್ಪದಲ್ಲಿ ಭಾಗಿಯಾಗುವವರು ಕೂಡಲೇ ದೇವಳದ ಕಚೇರಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಎಂದು ಕಾರ್ಯನಿರ್ವಹಣಾಧಿಕಾರಿ ರವಿಕಿರಣ್, ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ನಡಿಕೆರೆ ರತ್ನಾಕರ ಶೆಟ್ಟಿ ಮತ್ತು ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ರಾಜರ್ಷಿ ಕೆ. ವಾಸುದೇವ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಈ ಸಂದರ್ಭದಲ್ಲಿ ಪ್ರಧಾನ ಅರ್ಚಕರಾದ ಕಲ್ಯ ವೇದಮೂರ್ತಿ ಶ್ರೀನಿವಾಸ ತಂತ್ರಿ, ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ರಮೇಶ್ ಹೆಗ್ಡೆ ಕಲ್ಯ, ಘಂಟಾನಾದ ಸೇವಾ ಸಮಿತಿ ಅಧ್ಯಕ್ಷ ಮತ್ತು ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ವಿ. ಶೆಟ್ಟಿ ಬಾಲಾಜಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಮಾಧವ ಪಾಲನ್, ಶೇಖರ ಸಾಲ್ಯಾನ್, ರವೀಂದ್ರ ಮಲ್ಲಾರ್, ಕಟ್ಟಡ ಸಮಿತಿಯ ಸಂಚಾಲಕ ಸುಧಾಕರ ಶೆಟ್ಟಿ ಮಕರ, ಶಿಲ್ಪಾ ಜಿ. ಸುವರ್ಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು.


