ಉಡುಪಿ : ಕಾಂತಾರ ಚಿತ್ರತಂಡ ಇನ್ನೋರ್ವ ಕಲಾವಿದ ಇಂದು ಕುಸಿದು ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಕಾಂತಾರ ಮೊದಲನೇಯ ಚಿತ್ರದಲ್ಲಿ ನ್ಯಾಯವಾದಿಯಾಗಿ ಅಭಿನಯಿಸಿದ್ದ ಪೆರ್ಡೂರು ಮೂಲದ ಟಿ.ಪ್ರಭಾಕರ್ಕಲ್ಯಾಣಿ ಮೃತಪಟ್ಟವರು. ಬ್ಯಾಂಕ್ ಆಫ್ಬರೋಡಾದ ನಿವೃತ್ತ ಉದ್ಯೋಗಿಯಾಗಿದ್ದ ಇವರು, ರಂಗಭೂಮಿ ಕಲಾವಿದರಾಗಿ ವಿವಿಧ ನಾಟಕದಲ್ಲಿ ಅಭಿನಯಿಸುವ ಮೂಲಕ ಗುರುತಿಸಿಕೊಂಡವರು.
ಕಳೆದ ಎರಡು ದಿನಗಳ ಹಿಂದೆ ಮನೆಯಲ್ಲಿ ಜಾರಿಬಿದ್ದು, ಚಿಕಿತ್ಸೆ ಪಡೆದಿದ್ದ ಇವರು ಇಂದು ಬೆಳಿಗ್ಗೆ ಮನೆಯಲ್ಲಿದ್ದಾಗ ಕೈಕಾಲು ನೋವು ಎಂದು ಪತ್ನಿ ಜೊತೆ ಹೇಳಿಕೊಂಡಿದ್ದರು. ಇನ್ನೇನು ಆಸ್ಪತ್ರೆಗೆ ಚಿಕಿತ್ಸೆಗೆ ಕರೆದುಕೊಂಡು ಹೋಗಬೇಕೆನ್ನುವಷ್ಟರಲ್ಲಿ ಪ್ರಭಾಕರ್ ಮೃತಪಟ್ಟಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತ ಅಂತ್ಯಕ್ರಿಯೆ ಇಂದು ಬೀಡಿನ ಗುಡ್ಡೆಯ ರುದ್ರಭೂಮಿಯಲ್ಲಿ ನಡೆಯಲಿದೆ.
ಕಾಂತಾರ ಚಿತ್ರದಲ್ಲಿನ ಅಭಿನಯಕ್ಕಾಗಿ ಬಹಳಷ್ಟು ಉತ್ಸುಕರಾಗಿದ್ದ ಅವರು ಸುಮಾರು ಒಂದು ವರ್ಷಗಳ ಕಾಲ ಪಾತ್ರಕ್ಕಾಗಿ ಗಡ್ಡ ಬೆಳೆಸಿಕೊಂಡಿದ್ದರು. ಕೊನೆಯಲ್ಲಿ ಚಿತ್ರತಂಡ ನಿರ್ಧರಿಸಿದ ಪಾತ್ರ ಬದಲಾಯಿಸಿ ಬೇರೆ ಪಾತ್ರ ನೀಡಿದ್ದರು ಎನ್ನಲಾಗಿದೆ. ಈ ವಿಚಾರವನ್ನು ಆಪ್ತರ ಜೊತೆಗೆ ನೋವಿನಿಂದ ಹಂಚಿಕೊಂಡಿದ್ದರು ಎನ್ನಲಾಗಿದೆ.


