ಬೈಂದೂರು: ಸೂಪರ್ ಹಿಟ್ ಕಾಂತಾರ ಚಲನಚಿತ್ರದಲ್ಲಿ ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಜೊತೆಯಲ್ಲಿ ಕಾಣಿಸಿಕೊಂಡಿದ್ದ ಕೋಣ ಇಂದು ಮೃತಪಟ್ಟಿದೆ. ಚಿತ್ರದ ಆರಂಭದ ಕಂಬಳದ ದೃಶ್ಯದಲ್ಲಿ ಎರಡು ಕೋಣವನ್ನು ಓಡಿಸುವ ದೃಶ್ಯದಲ್ಲಿ ಕಾಣಿಸಿಕೊಂಡಿದ್ದ ಅಪ್ಪು ಕೋಣ ಮೃತಪಟ್ಟಿರುವುದು. ಬೈಂದೂರು ತಾಲೂಕು ಬೊಳಂಬಳ್ಳಿಯ ಕಂಬಳ ಪ್ರೇಮಿ ಪರಮೇಶ್ವರ್ ಭಟ್ಟರು ಪ್ರೀತಿಯಿಂದ ಸಾಕಿದ್ದ ಕೋಣ ಇದ್ದಾಗಿತ್ತು. ಪರಮೇಶ್ವರ್ ಅವರ ಮಗಳು ಚೈತ್ರಾ ಪರಮೇಶ್ವರ ಭಟ್ ಅವರು ಈ ಅಪ್ಪು ಮತ್ತು ಕಾಲ ಎನ್ನುವ ಕೋಣವನ್ನು ಅತ್ಯಂತ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.

ಕಾಂತಾರದ ಚಿತ್ರೀಕರಣಕ್ಕೆ ಮೊದಲು ರಿಷಬ್ ಶೆಟ್ಟಿ ಅವರು ಇದೇ ಬೊಳಂಬಳ್ಳಿ ಪರಮೇಶ್ವರ ಭಟ್ ಅವರ ಬಳಿ ತರಬೇತಿ ಪಡೆದು, ಅಪ್ಪು ಮತ್ತು ಕಾಲ ಕೋಣಗಳನ್ನು ಓಡಿಸಿದ್ದರು. ನೆಲ್ಲಿಕಾರಿನ ಶೇಣಿಕ್ ರಾಜ್ ಜೈನ್ ಅವರ ಬಳಿಯಿದ್ದ ಅಪ್ಪು ಕೋಣವನ್ನು ದಶಕದ ಹಿಂದೆ ಬೋಳದಗುತ್ತು ಸತೀಶ್ ಶೆಟ್ಟಿ ಅವರು ಕರೆತಂದಿದ್ದರು. ನೇಗಿಲು ಜೂನಿಯರ್ ವಿಭಾಗದಲ್ಲಿ ಎರಡು ಬಾರಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದಿತ್ತು.

ಆ ಬಳಿಕ ಬೋಳಂಬಳ್ಳಿ ಪರಮೇಶ್ವರ ಭಟ್ ಅವರ ಮನೆಗೆ ಸೇರಿತ್ತು. ಈ ಭಾಗಕ್ಕೆ ಬಂದ ಬಳಿಕ ಕುಂದಾಪುರ ಭಾಗದಲ್ಲಿ ನಡೆಯುವ ಸಾಂಪ್ರಾದಾಯಿಕ ಕಂಬಳಗಳಲ್ಲಿ ನಿರಂತರ ಐದು ವರ್ಷ ಚಾಂಪಿಯನ್ ಪಟ್ಟಕ್ಕೇರಿತ್ತು. 2023ರಲ್ಲಿ ನಡೆದಿದ್ದ ಪ್ರಥಮ ವರ್ಷದ ಬೆಂಗಳೂರು ಕಂಬಳದಲ್ಲಿ ಕನೆಹಲಗೆ ವಿಭಾಗದಲ್ಲಿ ನಿಶಾನೆಗೆ ನೀರು ಹರಿಸಿ ಪ್ರಥಮ ಪ್ರಶಸ್ತಿ ಪಡೆದಿತ್ತು. ಬಂಟ್ವಾಳ, ಮೂಲ್ಕಿ ಮತ್ತು ಮಂಗಳೂರು ಕಂಬಳಗಳಲ್ಲಿ ಪ್ರಶಸ್ತಿ ಪಡೆದಿದ್ದವು. ಸದ್ಯ ಅಪ್ಪು ಕೋಣ ಮೃತಪಟ್ಟಿರುವುದು ಕಂಬಳ ಪ್ರೇಮಿಗಳ ಬೇಸರಕ್ಕೆ ಕಾರಣವಾಗಿದೆ.



