ಉಡುಪಿ : ಕೃತಕ ಬುದ್ಧಿಮತ್ತೆ (ಎಐ) ಯಿಂದ ವೇಗವಾಗಿ ಬದಲಾಗುತ್ತಿರುವ ಜಗತ್ತಿಗೆ ಹೆಜ್ಜೆ ಇಡುತ್ತಿರುವ ವಿದ್ಯಾರ್ಥಿಗಳಿಗೆ ತಮ್ಮ ಜಾಗೃತರಾಗಿರಬೇಕು. ಎಐ ತಂತ್ರಜ್ಞಾನವನ್ನು ವಿಶ್ಲೇಷಣೆ ಮತ್ತು ದತ್ತಾಂಶ ಅನ್ವಯಿಸಲು ಮಾತ್ರ ಬಳಸಬೇಕು. ಆದರೆ ಅಂತಿಮ ನಿರ್ಧಾರವನ್ನು ಮನುಷ್ಯನೇ ಕೈಗೊಳ್ಳಬೇಕು ಎಂದು ನವ ಪದವೀಧರರಿಗೆ ಹೊಸದಿಲ್ಲಿ ಎನ್ಸಿಆರ್ನ ಶಿವನಾಡರ್ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಅನನ್ಯ ಮುಖರ್ಜಿ ಕರೆ ನೀಡಿದರು.

ಅವರು ಮಣಿಪಾಲ ಗ್ರೀನ್ಸ್ನಲ್ಲಿ ನಡೆಯುತ್ತಿರುವ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ (ಮಾಹೆ) ನ 33ನೇ ಘಟಿಕೋತ್ಸವದ ಮೊದಲ ದಿನ ಮುಖ್ಯ ಅತಿಥಿಯಾಗಿ ಮಾತನಾಡಿದರು. ಪ್ರೊ. ಚಾನ್ಸಲರ್ ಡಾ. ಎಚ್.ಎಸ್. ಬಲ್ಲಾಳ್ ಅಧಿಕೃತವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಾಹೆ ಕುಲಪತಿ ಲೆ. ಜ. (ಡಾ.) ಎಂ.ಡಿ. ವೆಂಕಟೇಶ್ ಅವರು ಸಂಸ್ಥೆಯ ಇತ್ತೀಚಿನ ಸಾಧನೆಗಳನ್ನು ವಿವರಿಸಿದರು.

ಘಟಿಕೋತ್ಸವದ ಮೊದಲ ದಿನ 1,648 ವಿದ್ಯಾರ್ಥಿಗಳು ವಿವಿಧ ಪದವಿಗಳನ್ನು ಸ್ವೀಕರಿಸಿದ್ದು, 64 ಮಂದಿ ಪಿಎಚ್.ಡಿ ಪದವಿಗಳನ್ನು ಪಡೆದಿದ್ದಾರೆ. ವಿವಿಧ ವಿಭಾಗಗಳಲ್ಲಿ ವಿಶಿಷ್ಟ ಸಾಧನೆ ತೋರಿದ ನಾಲ್ವರು ವಿದ್ಯಾರ್ಥಿಗಳಿಗೆ ಡಾ. ಟಿ.ಎಂ.ಎ. ಪೈ ಚಿನ್ನದ ಪದಕಗಳನ್ನು ಪ್ರದಾನ ಮಾಡಲಾಯಿತು.

ಮಾಹೆ ಕುಲಾಧಿಪತಿ ಡಾ. ರಾಮದಾಸ್ ಪೈ ಅವರ 90ನೇ ಜನ್ಮದಿನದ ಅಂಗವಾಗಿ ರೂಪಿಸಲಾದ ಅಂಚೆ ಲಕೋಟೆಯನ್ನು ಮಾಹೆ ಟ್ರಸ್ಟ್ ಟ್ರಸ್ಟಿ ವಸಂತಿ ಆರ್. ಪೈ ಹಾಗೂ ಉಡುಪಿ ವಿಭಾಗದ ಅಂಚೆ ಅಧೀಕ್ಷಕ ರಮೇಶ್ ಪ್ರಭು ಜಂಟಿಯಾಗಿ ಬಿಡುಗಡೆ ಮಾಡಿದರು.



