ಉಡುಪಿ: ಶ್ರೀಕೃಷ್ಣ ಮಠದಲ್ಲಿ ಹಮ್ಮಿಕೊಂಡಿದ್ದ ಲಕ್ಷಕಂಠ ಗೀತಾ ಪಠಣ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭಾರತ ಭಾಗ್ಯ ವಿಧಾತ ಬಿರುದು ನೀಡಿ ಸನ್ಮಾನಿಸಲಾಯಿತು. ಪರ್ಯಾಯ ಪುತ್ತಿಗೆ ಮಠಾಧೀಶ ಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಪ್ರಧಾನಿ ಮೋದಿಗೆ ಮರದ ಬೆಳ್ಳಿ ಮುಚ್ಚಿಸಿದ ಮೊಸರು ಕಡೆಯುವ ಕಡೆಗೋಲು ಬಿರುದನ್ನು ಪ್ರದಾನ ಮಾಡಿದರು. ಇದೇ ಸಂದರ್ಭದಲ್ಲಿ ಅವರು, ಕಾಶಿ ಕಾರಿಡಾರ್ ಮಾದರಿಯಲ್ಲಿ ಉಡುಪಿ ಕಾರಿಡಾರ್ ಅಭಿವೃದ್ಧಿಗಾಗಿ ಪ್ರಧಾನಿ ಅವರಿಗೆ ಮನವಿ ಸಲ್ಲಿಸಿದರು.

ಕಾರ್ಯಕ್ರಮದ ಅಂಗವಾಗಿ ಭಗವದ್ಗೀತೆಯ 18ನೇ ಅಧ್ಯಾಯದ ಕೊನೆಯ ಶ್ಲೋಕಗಳನ್ನು ಸಾವಿರಾರು ಭಕ್ತರೊಂದಿಗೆ ಸಾಮೂಹಿಕವಾಗಿ ಪಠಿಸಲಾಯಿತು. ಪ್ರಧಾನ ಮಂತ್ರಿ ಮೋದಿ ಅವರು ಎಲ್ಲರಿಗೂ ನಮಸ್ಕಾರ ಎಂದು ಕನ್ನಡದಲ್ಲಿ ಮಾತು ಆರಂಭಿಸಿ, ಜೈ ಶ್ರೀಕೃಷ್ಣ ಘೋಷಣೆ ನೀಡಿದರು. ಮೋದಿಯವರು ಮಾತನಾಡುತ್ತಾ, ಮಧ್ವಾಚಾರ್ಯರ ಸ್ಥಾಪನೆಗಳ ಮಹಿಮೆ, ದಾಸ ಪರಂಪರೆಯ ಕೊಡುಗೆ, ಕನಕದಾಸರ ಭಕ್ತಿ ಪರಂಪರೆ, ಮತ್ತು ಉಡುಪಿ ಮಠದ ಅನ್ನದಾನ ಸೇವೆಯ ಮಹತ್ವವನ್ನು ಶ್ಲಾಘಿಸಿದರು.

ಭಗವದ್ಗೀತೆಯ ‘ಸರ್ವಜನ ಸುಖಾಯ ಸರ್ವಜನ ಹಿತಾಯ ಸಂದೇಶವೇ ನಮ್ಮ ಸಬ್ಕಾ ಸಾಥ್–ಸಬ್ಕಾ ವಿಕಾಸ್ ನ ಪ್ರೇರಣೆ. ಭಾರತದ ಧರ್ಮ–ಧರ್ಮವೀರ ಪರಂಪರೆಯನ್ನು ಉಲ್ಲೇಖಿಸಿ, ಅತ್ಯಾಚಾರಿಗಳ ಅಂತ್ಯ, ದುಷ್ಟ ಸಂಹಾರವೂ ಧರ್ಮದ ಭಾಗ. ಅಗತ್ಯವಾದರೆ ಮಿಷನ್ ಸುದರ್ಶನ ಚಕ್ರದ ಪ್ರಯೋಗ ಕೂಡ ಮಾಡುತ್ತೇವೆ. 25 ನವೆಂಬರ್ರಂದು ಅಯೋಧ್ಯೆಯಲ್ಲಿ ಧರ್ಮಧ್ವಜ ಸ್ಥಾಪನೆ ನಡೆದ ಹಿನ್ನೆಲೆಯಲ್ಲಿ, ಅಯೋಧ್ಯೆಯಿಂದ ಉಡುಪಿ ತನಕ ರಾಮಭಕ್ತರ ಹರ್ಷ, ಸಂತೋಷ ಅಸಂಖ್ಯ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ತಮ್ಮ ಭಾವಚಿತ್ರಗಳನ್ನು ಹಿಡಿದು ನಿಂತಿದ್ದ ಭಕ್ತರಿಂದ ಆ ಚಿತ್ರಗಳನ್ನು ಪಡೆದುಕೊಳ್ಳುವಂತೆ ಎಸ್ಪಿಜಿ ಸಿಬ್ಬಂದಿಗೆ ಸೂಚಿಸಿದ ಮೋದಿ, ಹಿಂದೆ ವಿಳಾಸ ಬರೆಯಿರಿ, ಅಭಿನಂದನಾ ಪತ್ರ ಕಳುಹಿಸುತ್ತೇನೆ ಎಂದು ಹೇಳಿ ಭಕ್ತರನ್ನು ಸಮಾಧಾನಪಡಿಸಿದರು.

ಉಡುಪಿಯನ್ನು ಜನಸಂಘ ಮತ್ತು ಬಿಜೆಪಿಯ ಉತ್ತಮ ಆಡಳಿತ ಪರಂಪರೆಯ ಕರ್ಮಭೂಮಿ ಎಂದು ಅವರು ಪ್ರಶಂಸಿಸಿದರು. ವಿ.ಎಸ್. ಆಚಾರ್ಯ ಸೇರಿದಂತೆ ಕರಾವಳಿಯ ಹಿರಿಯ ನಾಯಕರನ್ನು ಸ್ಮರಿಸಿದರು.

ಲಕ್ಷಕಂಠ ಗೀತಾ ಪಠಣ ಯಜ್ಞವನ್ನು ಹಮ್ಮಿಕೊಂಡಿರುವ ಸುಗುಣೇಂದ್ರ ತೀರ್ಥ ಸ್ವಾಮೀಜಿಗಳಿಗೆ ಪ್ರಧಾನಿ ಅಭಿನಂದನೆ ಸಲ್ಲಿಸಿ, ಇದು ಸನಾತನ ಸಂಸ್ಕೃತಿ ಮತ್ತು ನವಪೀಳಿಗೆ ನಡುವಿನ ಆಧ್ಯಾತ್ಮಿಕ ಸೇತುವೆ ಎಂದು ತಿಳಿಸಿದ್ದಾರೆ.



