ಉಡುಪಿ: ಕರಾವಳಿ ಪ್ರದೇಶದ ಭಜನೆ ಪರಂಪರೆಯನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಪಸರಿಸುವ ಉದ್ದೇಶದಿಂದ ಕರಾವಳಿ ಭಜನಾ ಸಮಾವೇಶ ಡಿಸೆಂಬರ್ 06 ಮತ್ತು 07 ರಂದು ಉಡುಪಿಯ ಎಂಜಿಎಂ ಕಾಲೇಜಿನ ಟಿ. ಮೋಹನದಾಸ್ ಪೈ ಅಮೃತ ಸೌಧ ಸಭಾಂಗಣದಲ್ಲಿ ನಡೆಯಲಿದೆ ಎಂದು ಸಂತಕವಿ ಕನಕದಾಸ ಅಧ್ಯಯನ ಕೇಂದ್ರದ ಸಂಚಾಲಕಿ ಡಾ. ಕಾತ್ಯಾಯಿನಿ ಕುಂಜಿಬೆಟ್ಟು ತಿಳಿಸಿದರು.

ಅವರು ಉಡುಪಿ ಜಿಲ್ಲಾ ಪತ್ರಕರ್ತರ ಸಂಘದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು, ಕರಾವಳಿ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಕಾಸರಗೋಡು ಸೇರಿದಂತೆ ಒಟ್ಟು 13 ಭಜನಾ ತಂಡಗಳು ಎರಡು ದಿನಗಳಲ್ಲಿ ಸಾಂಸ್ಕೃತಿಕ ಭಜನಾ ಗಾಯನ ಪ್ರದರ್ಶನ ಮಾಡಲಿವೆ.ಭಜನೆಗಳು ಭಾರತೀಯ ಸಂಸ್ಕೃತಿ, ಭಕ್ತಿ, ಜನಜೀವನ, ದುಃಖ–ಸುಖ, ಬದುಕಿನ ತತ್ತ್ವ, ಮತ್ತು ದೇಸಿ ಪರಂಪರೆಯನ್ನು ಒಳಗೊಂಡಿರುವ ಮಹತ್ವದ ಸಂಗೀತರೂಪವಾಗಿದ್ದು, ಪುರಾತನ ಕಾಲದಿಂದ ಮನೆಮಠಗಳಲ್ಲಿ ಸಂವಹನವಾಗಿರುವ ಸಾಂಸ್ಕೃತಿಕ ಮಾಧ್ಯಮವೆಂದು ಅವರು ವಿವರಿಸಿದರು. ಭಜನೆಗಳ ರಚನೆ, ಗಾಯನ, ತಾಳ–ರಾಗಗಳ ಪ್ರಾಥಮಿಕ ಜ್ಞಾನ ಮತ್ತು ಕುಣಿತಗಳೊಂದಿಗೆ ಜನಪರ ಕಲೆಯ ಪ್ರಮುಖ ಅಂಗವಾಗಿ ಅವು ಉಳಿದಿವೆ ಎಂದರು.

ಒಟ್ಟು 13 ತಂಡಗಳು ಭಾಗಿಯಾಗಲಿದ್ದು, ಮೇಶ್ ಕಲ್ಯಾಡಿ ಮತ್ತು ಜ್ಯೋತಿ ದೇವಾಡಿಗ ಭಜನಾ ಗಾಯನದ ಪರಿಚಯ ಮಾಡಿಕೊಡಲಿದ್ದಾರೆ. ಡಿಸೆಂಬರ್ 06ರ ಬೆಳಗ್ಗೆ 10 ಗಂಟೆಗೆ ಡಾ. ಬಿ.ಎ. ವಿವೇಕ ರೈಉದ್ಘಾಟನೆ ಮಾಡಲಿದ್ದು, ಕಾ.ತ. ಚಿಕ್ಕಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ. ಡಾ. ನಾರಾಯಣ ಸಭಾಹಿತ್, ಪ್ರೊ. ವನಿತಾಮಯ್ಯ, ಡಾ. ದೇವಿದಾಸ್ ನಾಯ್ಕ್, ಪೂರ್ಣಿಮಾ, ಡಾ. ಎಂ. ವಿಶ್ವನಾಥ ಪೈ ಮುಖ್ಯ ಅತಿಥಿಗಳಾಗಿರುತ್ತಾರೆ. ಡಿಸೆಂಬರ್ 07 ರಂದು ಸಂಗೀತ ಹಾಗೂ ಸಾಂಸ್ಕೃತಿಕ ಚಿಂತಕಿ ಪ್ರತಿಭಾ ಎಂ.ಎಲ್. ಸಾಮಗ ಸಮಾರೋಪ ನುಡಿ ನೀಡಲಿದ್ದಾರೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಡಾ. ಜಗದೀಶ್ ಶೆಟ್ಟಿ, ಡಾ. ಅರುಣ್ ಕುಮಾರ್ ಮತ್ತು ಸಂಯೋಜಕ ರವಿರಾಜ್ ಎಚ್.ಪಿ. ಉಪಸ್ಥಿತರಿದ್ದರು.



