ಉಡುಪಿ: ಆಪದ್ಬಾಂಧವ ಎಂದು ಪ್ರಸಿದ್ಧರಾದ ಈಶ್ವರ ಮಲ್ಪೆ ಅವರನ್ನು ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಮಾಜ ಕಾರ್ಯ ವಿಭಾಗದ ಅಂಬಾಸಿಡರ್ ಆಗಿ ನೇಮಕ ಮಾಡಲಾಗಿದೆ. ಒಂದು ವರ್ಷದ ಅವಧಿಗೆ ಈ ನೇಮಕ ಮಾಡಲಾಗಿದ್ದು, ಯುವಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಲಿದೆ. ಆಳ್ವಾಸ್ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥೆ ಡಾ. ಮಧುಮಾಲ ಕೆ. ಅವರು ನೀಡಿದ ಮಾಹಿತಿಯ ಪ್ರಕಾರ, ಯುವಜನರಲ್ಲಿ ಮೊಬೈಲ್ ದುರುಪಯೋಗ ತಡೆ, ಸ್ವಯಂ ಸುರಕ್ಷತೆ, ಭವಿಷ್ಯದ ಯೋಜನೆ ಹಾಗೂ ನೀರಿನತ್ತ ಅಜಾಗರೂಕವಾಗಿ ತೆರಳಿ ಪ್ರಾಣ ಕಳೆದುಕೊಳ್ಳುತ್ತಿರುವ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿಸಲು ಈ ಅಭಿಯಾನ ಕೈಗೊಳ್ಳಲಾಗಿದೆ.

ಮೂಡುಬಿದರೆಯ ಆಳ್ವಾಸ್ ಶಿಕ್ಷಣ ಸಂಸ್ಥೆ ಮತ್ತು ಅದರ ಸುತ್ತಮುತ್ತಲಿನ 15 ಕಾಲೇಜುಗಳಲ್ಲಿ ಈ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದರ ಅಂತಿಮ ಹಂತವಾಗಿ ಮಲ್ಪೆ ಬೀಚ್ನಲ್ಲಿ ವಿಶೇಷ ಅವೇರ್ನೆಸ್ ಕಾರ್ಯಕ್ರಮ ಆಯೋಜಿಸಲಾಗುವುದು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗಾಗಿ ಜಾಗೃತಿ ಕುರಿತ ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ, ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಗುತ್ತದೆ. ಕಾರ್ಯಕ್ರಮದ ಮುಖ್ಯ ಉದ್ದೇಶ ವಿದ್ಯಾರ್ಥಿಗಳು ಮತ್ತು ಯುವಜನತೆ ಕ್ಷುಲ್ಲಕ ಕಾರಣಗಳಿಗೆ ತಮ್ಮ ಜೀವವನ್ನು ಕಳೆದುಕೊಳ್ಳದಂತೆ, ತಮ್ಮ ಭವಿಷ್ಯ ಹಾಗೂ ಜೀವನದ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂಬ ಸಂದೇಶ ನೀಡುವುದಾಗಿದೆ.

ಈ ಅಭಿಯಾನದ ಅಂಗವಾಗಿ ಈಶ್ವರ ಮಲ್ಪೆ ಈಗಾಗಲೇ ಆಳ್ವಾಸ್ ಕಾಲೇಜಿನಲ್ಲಿ ಜಾಗೃತಿ ಉಪನ್ಯಾಸ ನೀಡಿದ್ದಾರೆ. ಮುಂದಿನ ದಿನಗಳಲ್ಲಿ ಅವರು ಹಾಗೂ ಅವರ ತಂಡದ ಸದಸ್ಯರು ಈ ಕಾರ್ಯದಲ್ಲಿ ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದು ಡಾ. ಮಧುಮಾಲ ಕೆ. ತಿಳಿಸಿದ್ದಾರೆ.


